ಮುಂಬೈ: ದೆಹಲಿಯಲ್ಲಿ ನಡೆದ ಶ್ರದ್ಧಾ ವಾಲಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರದ್ಧಾ ತಂದೆ ವಿಕಾಸ್ ವಾಲಕರ್ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಶುಕ್ರವಾರ ನಗರದ ನಿವಾಸದಲ್ಲಿ ಭೇಟಿಯಾದರು. ಬಿಜೆಪಿ ಮುಖಂಡ ಕಿರಿತ್ ಸೊಮೈಯ ಕೂಡ ಜೊತೆಗಿದ್ದರು.
ತನ್ನ ಸಹಜೀವನ ಸಂಗಾತಿ ಶ್ರದ್ಧಾಳನ್ನು ಕೊಲೆಗೈದ ಅಫ್ತಾಬ್ ಅಮೀನ್ ಪೂನಾವಾಲಾ, ಆಕೆಯ ದೇಹವನ್ನು 35 ತುಂಡಗಳಾಗಿ ಕತ್ತರಿಸಿ ಬಿಸಾಡಿದ್ದ. ಪ್ರಕರಣದ ತನಿಖೆ ನಡೆಯುತ್ತಿದ್ದು ಈವರೆಗೆ ಯಾವುದೇ ಮಹತ್ವದ ಸುಳಿವು ದೊರೆತಿಲ್ಲ. ದೆಹಲಿ ನ್ಯಾಯಾಲಯ ಶುಕ್ರವಾರ ಅಫ್ತಾಬ್ ನ್ಯಾಯಾಂಗ ಬಂಧವನ್ನು ಮತ್ತೆ 14 ದಿನ ವಿಸ್ತರಿಸಿದೆ.
ಭೇಟಿ ಬಳಿಕ ಮಾತನಾಡಿದ ವಿಕಾಸ್, ಮಗಳ ಸಾವಿಗೆ ನ್ಯಾಯ ಸಿಗಬೇಕು. ಆರೋಪಿಗೆ ಗರಿಷ್ಠ ಶಿಕ್ಷೆಯಾಗಬೇಕು. ಫಡಣವೀಸ್ ಕೂಡ ನ್ಯಾಯ ದೊರಕಿಸುವ ಭರವಸೆ ನೀಡಿದ್ದಾರೆ. ದೆಹಲಿ ಪೊಲೀಸರು ಕೂಡ ಇದೇ ಭರವಸೆ ನೀಡಿದ್ದಾರೆ ಎಂದರು.
ಟುಲಿ ಮತ್ತು ವಾಸೈ ಪೊಲೀಸರು ಮೊದಲೇ ಆತನ ವಿರುದ್ಧದ ಪ್ರಕರಣಗಳನ್ನು ತನಿಖೆ ನಡೆಸಿದ್ದರೆ ನನ್ನ ಮಗಳು ಬದುಕುತ್ತಿದ್ದಳು. ದೆಹಲಿ ರಾಜ್ಯಪಾಲರು, ಡಿಸಿಪಿ ಅವರನ್ನು ಭೇಟಿಯಾಗಿದ್ದು, ಎಲ್ಲರೂ ನ್ಯಾಯ ದೊರಕಿಸುವ ಭರವಸೆ ನೀಡಿದ್ದಾರೆ ಎಂದರು.