ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋತ ವಿಧಾನಸಭಾ ಕ್ಷೇತ್ರಗಳ ಮರು ಮತಎಣಿಕೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಬಿಜೆಪಿ ಪರಿಶೀಲಿಸುತ್ತಿದೆ.
ಈ ಕುರಿತು ಶನಿವಾರ ಮುರ್ಷಿದಾಬಾದ್ನಲ್ಲಿ ಮಾತನಾಡಿರುವ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ‘ಮರು ಮತಎಣಿಕೆ ಕೋರಿ ಮನವಿ ಸಲ್ಲಿಸುವ ಕುರಿತು ನಮ್ಮ ವಕೀಲರೊಂದಿಗೆ ಚರ್ಚಿಸುತ್ತಿದ್ದೇವೆ,‘ ಎಂದು ಹೇಳಿದ್ದಾರೆ.
ನಂದಿಗ್ರಾಮ ಸೇರಿದಂತೆ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮರು ಮತಎಣಿಕೆಗೆ ಒತ್ತಾಯಿಸಿ ತೃಣಮೂಲ ಕಾಂಗ್ರೆಸ್ ಕೋಲ್ಕತ್ತ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ ಬಿಜೆಪಿಯು ತಾನೂ ಈ ಆಲೋಚನೆ ನಡೆಸಿದೆ.
ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಬಿಜೆಪಿಯ ಸುವೇಂದು ಅಧಿಕಾರಿ ಅವರ ವಿರುದ್ಧ ಕೇವಲ 1956ರ ಮತಗಳ ಅಂತರದಲ್ಲಿ ಸೋಲುಂಡಿದ್ದರು.
ನಂದಿಗ್ರಾಮ ಮಾತ್ರವಲ್ಲದೇ ಮೊಯ್ನಾ, ಬೊಂಗಾಂವ್ ದಕ್ಷಿಣ, ಗೋಘಾಟ್ ಮತ್ತು ಬಲರಾಂಪುರ್ ವಿಧಾನಸಭಾ ಕ್ಷೇತ್ರಗಳ ಟಿಎಂಸಿ ಅಭ್ಯರ್ಥಿಗಳು ಮರು ಮತಎಣಿಕೆ ಕೋರಿ ಹೈಕೋರ್ಟ್ನಲ್ಲಿ ಚುನಾವಣಾ ತಕರಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ.