ನವದೆಹಲಿ: ಸರ್ಕಾರದ ಜತೆ ಆರನೇ ಸುತ್ತಿನ ಮಾತುಕತೆ ಹಿನ್ನೆಲೆಯಲ್ಲಿ ರೈತ ನಾಯಕರು ಇಂದು (ಮಂಗಳವಾರ) ಸಂಜೆ 7 ಗಂಟೆಗೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ.
ಸರ್ಕಾರ ಮತ್ತು ರೈತ ಸಂಘಟನೆಗಳ ನಾಯಕರ ಜತೆಗಿನ ಆರನೇ ಸುತ್ತಿನ ಮಾತುಕತೆ ಬುಧವಾರ ನಿಗದಿಯಾಗಿದೆ.
‘ಅಮಿತ್ ಶಾ ಅವರ ಜತೆ ಇಂದು ಸಂಜೆ 7 ಗಂಟೆಗೆ ಮಾತುಕತೆ ನಡೆಸಲಿದ್ದೇವೆ. ಈಗ ಸಿಂಘು ಗಡಿಗೆ ತೆರಳಲಿದ್ದೇವೆ. ಅಲ್ಲಿಂದ ಗೃಹ ಸಚಿವರ ಬಳಿ ತೆರಳಲಿದ್ದೇವೆ’ ಎಂದು ಭಾರತೀಯ ಕಿಸಾನ್ ಸಂಘದ ವಕ್ತಾರ ರಾಕೇಶ್ ತಿಕಾಯತ್ ತಿಳಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನವೆಂಬರ್ 26ರಿಂದ ದೆಹಲಿ ಗಡಿ ಪ್ರದೇಶಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ಪ್ರತಿಪಕ್ಷಗಳಿಂದಲೂ ಬೆಂಬಲ ವ್ಯಕ್ತವಾಗಿದೆ.
ರೈತ ನಾಯಕರು ಮತ್ತು ಕೇಂದ್ರ ಸಚಿವರ ಮಧ್ಯೆ ನಡೆದ ಐದನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿತ್ತು. ಹೀಗಾಗಿ ಬುಧವಾರ ಆರನೇ ಸುತ್ತಿನ ಮಾತುಕತೆ ನಿಗದಿಯಾಗಿದೆ.