ತಿರುವನಂತಪುರ: ಕೇರಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಆಡಳಿತಾರೂಢ ಎಲ್ಡಿಎಫ್ ಮೈತ್ರಿಕೂಟ ತೊರೆಯುವುದಾಗಿ ಎನ್ಸಿಪಿ ಬಣ ಘೋಷಿಸಿದೆ. ಮುಂದೆ ಯುಡಿಎಫ್ ಮೈತ್ರಿಕೂಟದ ಜತೆ ಕೈಜೋಡಿಸುವುದಾಗಿಯೂ ತಿಳಿಸಿದೆ.
ಕಾಂಗ್ರೆಸ್ನ ಹಿರಿಯ ನಾಯಕ ರಮೇಶ್ ಚೆನ್ನಿತಲ ಅವರು ಹಮ್ಮಿಕೊಂಡಿರುವ ‘ಐಶ್ವರ್ಯ ಕೇರಳ’ ಯಾತ್ರೆಯು ಭಾನುವಾರ ಕೋಟ್ಟಯಂನ ಪಾಲಾ ವಿಧಾನಸಭಾ ಕ್ಷೇತ್ರ ತಲುಪಲಿದೆ. ಆ ಸಂದರ್ಭ ಯಾತ್ರೆಯಲ್ಲಿ ಭಾಗವಹಿಸುವುದಾಗಿ ಎನ್ಸಿಪಿ ಬಣದ ನೇತೃತ್ವ ವಹಿಸಿರುವ ಶಾಸಕ ಮಣಿ ಸಿ. ಕಪ್ಪನ್ ಅವರು ತಿಳಿಸಿದ್ದಾರೆ. ಪಾಲಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ ಕಪ್ಪನ್.
2019ರ ವಿಧಾನಸಭೆ ಉಪ ಚುನಾವಣೆಯಲ್ಲಿ ಕಪ್ಪನ್ ಅವರು ಪಾಲಾ ವಿಧಾನಸಭಾ ಕ್ಷೇತ್ರದಿಂದ ಎಲ್ಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು.
ಪಾಲಾ ವಿಧಾನಸಭಾ ಕ್ಷೇತ್ರವನ್ನು ಈಚೆಗೆ ಯುಡಿಎಫ್ ಮೈತ್ರಿಕೂಟ ತೊರೆದಿರುವ ಜೋಸ್ ಕೆ. ಮಣಿ ನೇತೃತ್ವದ ‘ಕೇರಳ ಕಾಂಗ್ರೆಸ್ (ಎಂ)’ಗೆ ಬಿಟ್ಟುಕೊಡುವ ಎಲ್ಡಿಎಫ್ ರಾಜ್ಯ ನಾಯಕತ್ವದ ವಿರುದ್ಧ ಕಪ್ಪನ್ ಬಂಡಾಯವೆದ್ದಿದ್ದಾರೆ.
ಆದಾಗ್ಯೂ, ಈ ಬೆಳವಣಿಗೆ ಕುರಿತು ಎನ್ಸಿಪಿಯ ರಾಷ್ಟ್ರೀಯ ನಾಯಕತ್ವವು ಪ್ರತಿಕ್ರಿಯಿಸಿಲ್ಲ. ಕಾಂಗ್ರೆಸ್ ನಾಯಕ, ಮಾಜಿ ಸಚಿವ ಕೆ.ಎಂ.ಮಣಿ ಅವರ ನಿಧನದಿಂದ ತೆರವಾಗಿದ್ದ ಪಾಲಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಪ್ಪನ್ ಅವರು ಕಾಂಗ್ರೆಸ್ ಅಭ್ಯರ್ಥಿ ಜೋಸ್ ಟಾಮ್ ವಿರುದ್ಧ ಜಯಗಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.