ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬಾಗದತ್ತ ಎಐಎಡಿಎಂಕೆ: ಜಯಲಲಿತಾ ಆಪ್ತನ ಬಂಡಾಯ

ಪಳನಿಸ್ವಾಮಿ ಕೈಮೇಲು, ಪನ್ನೀರಸೆಲ್ವಂಗೆ ಹಿನ್ನಡೆ
Last Updated 11 ಜುಲೈ 2022, 18:38 IST
ಅಕ್ಷರ ಗಾತ್ರ

ಚೆನ್ನೈ: 2002ರ ಫೆಬ್ರುವರಿಯಲ್ಲಿ ಜಯಲಲಿತಾ ಅವರಿಂದ ದೊರೆತ ಮುಖ್ಯಮಂತ್ರಿ ಪಟ್ಟವನ್ನು ಐದು ತಿಂಗಳು ನಿರ್ವಹಿಸಿ, ಅದನ್ನು ಹಾಗೆಯೇ ಅವರಿಗೆ ಹಿಂದಿರುಗಿಸಿದ್ದ ಒ.ಪನ್ನೀರಸೆಲ್ವಂ ಅವರು ನಂಬಿಕಸ್ಥ ಎನಿಸಿಕೊಂಡು, ಪಕ್ಷದಲ್ಲಿ ಜಯಲಲಿತಾ ನಂತರದ ಸ್ಥಾನಕ್ಕೆ ಅರ್ಹತೆ ಪಡೆದುಕೊಂಡಿದ್ದರು.

ಮತ್ತೆ 2014ರಲ್ಲಿ, ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜಯಲಲಿತಾ ಅವರು ಜೈಲಿಗೆ ಹೋಗುವ ಸಂದರ್ಭ ಎದುರಾದಾಗಲೂ ಮುಖ್ಯಮಂತ್ರಿ ಹುದ್ದೆಗೆ ಪನ್ನೀರಸೆಲ್ವಂ ಹೊರತು ಬೇರೆ ಆಯ್ಕೆ ಇರಲಿಲ್ಲ. 2016ರ ಡಿಸೆಂಬರ್ 5ರಂದು ಜಯಲಲಿತಾ ಅವರು ನಿಧನರಾಗುವ ಮುನ್ನ 75 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದಾಗ ಅವರ ಸ್ಥಾನವನ್ನು ನಿರ್ವಹಿಸಿದ್ದವರು ಇದೇ ಪನ್ನೀರಸೆಲ್ವಂ. ಜಯಲಲಿತಾ ಅವರ ಪರಮಾಪ್ತ ಎಂದು ವ್ಯಾಪಕವಾಗಿ ಪರಿಗಣಿತವಾಗಿದ್ದರೂ, ಪನ್ನೀರಸೆಲ್ವಂ ಅವರು ಅಧಿಕಾರದಲ್ಲಿದ್ದಾಗ ಎಂದೂ ತಮ್ಮ ಪ್ರಭಾವ ಬಳಸಿಕೊಳ್ಳಲಿಲ್ಲ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬುವಲ್ಲಿ ವಿಫಲರಾದರು.

2017ರ ಫೆಬ್ರುವರಿ 7ರಂದು ಮರೀನಾ ಕಡಲ ಕಿನಾರೆಯಲ್ಲಿ ಮೊಟ್ಟಮೊದಲ ಬಾರಿಗೆ ಮೌನ ಮುರಿದ ಅವರು, ಶಶಿಕಲಾ ವಿರುದ್ಧ ಬಂಡಾಯದ ಕಹಳೆ ಊದಿದರು. ಪನ್ನೀರಸೆಲ್ವಂ ಅವರು ಕೊನೆಗೂ ನಾಯಕರಾಗಿ ಹೊರಹೊಮ್ಮಿದರು ಎಂದು ಈ ಘಟನೆಯನ್ನು ವಿಶ್ಲೇಷಿಸಲಾಗಿತ್ತು. ಬಿಜೆಪಿ ಬೆನ್ನಿಗಿದ್ದರೂ, ಪನ್ನೀರಸೆಲ್ವಂ ಅವರಿಗೆ ಪಕ್ಷದ ಮೇಲೆ ಶಶಿಕಲಾ ಅವರು ಹೊಂದಿದ್ದ ಹಿಡಿತವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. 134 ಶಾಸಕರ ಪೈಕಿ 11 ಶಾಸಕರು ಮಾತ್ರ ಪನ್ನೀರಸೆಲ್ವಂ ಪಾಳಯದಲ್ಲಿ ಗುರುತಿಸಿಕೊಂಡರು.

ವಿಶ್ವಾಸಮತ ಯಾಚನೆಯಲ್ಲಿ ಪನ್ನೀರಸೆಲ್ವಂ ಬಣವು ಪಳನಿಸ್ವಾಮಿ ಸರ್ಕಾರದ ವಿರುದ್ಧ ಮತ ಚಲಾಯಿಸಿತು. ಉಳಿದ 122 ಶಾಸಕರ ಬೆಂಬಲದೊಂದಿಗೆ ಪಳನಿಸ್ವಾಮಿ ಸರ್ಕಾರ ವಿಶ್ವಾಸಮತ ಗೆದ್ದುಕೊಂಡಿತು. ಸೋಮವಾರ ನಡೆದ ಜನರಲ್ ಕೌನ್ಸಿಲ್ ಸಭೆಯಲ್ಲಿ ಪನ್ನೀರಸೆಲ್ವಂ ಅವರನ್ನು ಸಂಚಾಲಕ ಹುದ್ದೆಯಿಂದ ತೆಗೆದುಹಾಕಿದ್ದಲ್ಲದೇ ಪಕ್ಷದಿಂದಲೇ ಉಚ್ಚಾಟಿಸುವಲ್ಲಿ ಪಳನಿಸ್ವಾಮಿ ಬಣ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT