ನವದೆಹಲಿ (ಪಿಟಿಐ): ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಯಾವುದೇ ರೀತಿಯ ಧಕ್ಕೆ ಆಗಲು ಬಿಡುವುದಿಲ್ಲ ಎಂದು ಭಾರತೀಯ ವಾಯುಪಡೆಯ (ಐಎಎಫ್) ನೂತನ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಹೇಳಿದ್ದಾರೆ.
ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್.ಭದೌರಿಯಾ ಅವರ ನಿವೃತ್ತಿಯ ನಂತರ ಐಎಎಫ್ ಮುಖ್ಯಸ್ಥರಾಗಿರುವ ಚೌಧರಿ ಅವರು ಗುರುವಾರ ಅಧಿಕಾರ ವಹಿಸಿಕೊಂಡರು.
ಹೊಸದಾಗಿ ಸೇರ್ಪಡೆಗೊಂಡ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳನ್ನು ಈಗಿರುವ ಆಯುಧಗಳೊಂದಿಗೆ ಸೇರಿಸಿ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುವುದು ಪ್ರಮುಖ ಆದ್ಯತೆಯಾಗಿದೆ ಎಂದು ಚೌಧರಿ ಹೇಳಿದರು.
ಶಸ್ತ್ರಾಸ್ತ್ರದಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ, ಸ್ವದೇಶೀಕರಣ, ನಾವೀನ್ಯತೆಯ ಉತ್ತೇಜನ, ಸೈಬರ್ ಭದ್ರತೆಯನ್ನು ಬಲಪಡಿಸುವುದು ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಹೊಸ ತರಬೇತಿ ವಿಧಾನಗಳನ್ನು ಅಳವಡಿಸಿಕೊಳ್ಳುವ ಕುರಿತು ಕಾರ್ಯಕ್ರಮದಲ್ಲಿ ಐಎಎಫ್ ಸಿಬ್ಬಂದಿಗೆ ಮಾಹಿತಿ ನೀಡಿದರು.
ಇದಕ್ಕೂ ಮುನ್ನ ವಿವೇಕ್ ರಾಮ್ ಚೌಧರಿ ಅವರು ವಾಯುಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು.