ಅಲಹಾಬಾದ್: ಪ್ರಯಾಗ್ರಾಜ್ ವಿಮಾನನಿಲ್ದಾಣಕ್ಕೆ ಮೀಸಲಾದ ಕಾರಿಡಾರ್ ಯೋಜನೆಗಾಗಿ ಸ್ಥಳೀಯ ಸಂಸ್ಥೆಯು ಕ್ಲಿನಿಕ್ ಮತ್ತು ರೆಸ್ಟೋರೆಂಟ್ ಅನ್ನು ಕೆಡವಲು ಯೋಜಿಸಿದ್ದ ಕಾರ್ಯಾಚರಣೆಗೆ ಅಲಹಾಬಾದ್ ಹೈಕೋರ್ಟ್ ಭಾನುವಾರ ತುರ್ತು ವಿಚಾರಣೆಯಲ್ಲಿ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಪ್ರೀತಿಂಕರ್ ದಿವಾಕರ್ ಮತ್ತು ಅಶುತೋಷ್ ಶ್ರೀವಾಸ್ತವ ಅವರನ್ನೊಳಗೊಂಡ ಪೀಠವು ರಾಕೇಶ್ ಗುಪ್ತಾ ಮತ್ತು ಇತರ ಇಬ್ಬರು ಸಲ್ಲಿಸಿದ ಅರ್ಜಿಯ ಮೇರೆಗೆ ಈ ಆದೇಶವನ್ನು ನೀಡಿದೆ.
‘ಸ್ಥಳೀಯ ಸಂಸ್ಥೆಯು ಕಾರಿಡಾರ್ ಯೋಜನೆಗಾಗಿ ವಶಪಡಿಸಿಕೊಳ್ಳಲು ಯೋಜಿಸಿರುವ ಜಾಗದಲ್ಲಿ 100 ವರ್ಷಗಳಿಂದ ಹೋಮಿಯೊಪಥಿ ಕ್ಲಿನಿಕ್ ಮತ್ತು ರೆಸ್ಟೋರೆಂಟ್ ಅನ್ನು ಹೊಂದಿದ್ದೇವೆ. ಅಷ್ಟೇ ಅಲ್ಲ, ಆಸ್ತಿಗೆ ಮನೆ ಸಂಖ್ಯೆಯನ್ನೂ ನೀಡಲಾಗಿದೆ’ ಎಂದು ಅರ್ಜಿದಾರರು ನ್ಯಾಯಾಲಯದ ಮುಂದೆ ವಾದ ಮಂಡಿಸಿದರು.
ಅರ್ಜಿದಾರರು ಭೂಮಿಯನ್ನು ಹೇಗೆ ಅತಿಕ್ರಮಿಸಿದ್ದಾರೆ ಮತ್ತು ಅದನ್ನು ಏಕೆ ನೆಲಸಮಗೊಳಿಸಬೇಕು ಎಂಬುದನ್ನು ಫೆ. 24ಕ್ಕೆ ನಿಗದಿಪಡಿಸಿದ ಮುಂದಿನ ವಿಚಾರಣೆಯೊಳಗೆ ಮಾಹಿತಿ ನೀಡಬೇಕು ಎಂದು ನ್ಯಾಯಾಲಯವು, ಸಂಬಂಧಿಸಿದ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿತು.