ನವದೆಹಲಿ: ಬೆಂಗಳೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಪೀಪಲ್ ಡೆಮಾಕ್ರಟಿಕ್ ಪಾರ್ಟಿ ಮುಖಂಡ ಅಬ್ದುಲ್ ನಜೀರ್ ಮದನಿಗೆ ಕೇರಳಕ್ಕೆ ಭೇಟಿ ನೀಡಲು, ಅಲ್ಲಿನ ತನ್ನ ಮನೆಯಲ್ಲಿ ವಾಸಿಸಲು ಅನುಮತಿ ನೀಡುವುದು ದೇಶದ ಭದ್ರತೆಗೆ ಅಪಾಯ ತಂದೊಡ್ಡಲಿದೆ ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಈ ವಿಷಯದಲ್ಲಿ ಅನುಮತಿ ನೀಡಿದರೆ, ಆತ ಪರಾರಿಯಾಗಲು ಸಾಧ್ಯವಾಗುವುದು. ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಈಗ ತಲೆಮರೆಸಿಕೊಂಡಿರುವವರೊಂದಿಗೆ ಮತ್ತೆ ಸಂಪರ್ಕ ಬೆಳೆಸಿಕೊಂಡು ಆತ ಇನ್ನಷ್ಟೂ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇದೆ ಎಂದೂ ಕರ್ನಾಟಕ ತಿಳಿಸಿದೆ.
ಕೋರ್ಟ್ನ ಅನುಮತಿ ಇಲ್ಲದೇ ಬೆಂಗಳೂರಿನಿಂದ ಹೊರಗೆ ಹೋಗುವಂತಿಲ್ಲ ಎಂಬ ಜಾಮೀನಿಗೆ ಸಂಬಂಧಿಸಿದ ನಿರ್ಬಂಧವನ್ನು ಸಡಿಲಿಸುವಂತೆ ಕೋರಿ ಮದನಿ ಸಲ್ಲಿಸಿದ್ದ ಅರ್ಜಿಗೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿದ ವೇಳೆಯಲ್ಲಿ ಈ ವಿಷಯವನ್ನು ತಿಳಿಸಿದೆ.