ದುಮರ್ಜುಲ, ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನ್ನ ಸೋದರಳಿಯನ ಏಳಿಗೆಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆ ವೇಳೆ ಅವರೊಟ್ಟಿಗೆ ಯಾವ ಮುಖಂಡರೂ ಇರುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಭಾನುವಾರ ವಾಗ್ದಾಳಿ ನಡೆಸಿದರು.
ಇಲ್ಲಿ ನಡೆದ ಪಕ್ಷದ ರ್ಯಾಲಿಯನ್ನು ಉದ್ದೇಶಿಸಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
‘ಯಾಕೆ ಇಷ್ಟೊಂದು ಜನ ಮುಖಂಡರು ತೃಣಮೂಲ ಕಾಂಗ್ರೆಸ್ ತೊರೆಯುತ್ತಿದ್ದಾರೆ ಎಂಬ ಬಗ್ಗೆ ಮಮತಾ ಬ್ಯಾನರ್ಜಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರು ಉತ್ತಮ ಆಡಳಿತ ನೀಡುವಲ್ಲಿ ವಿಫಲರಾಗಿರುವುದು ಸಹ ಇದಕ್ಕೆ ಕಾರಣ. ವಿಧಾನಸಭೆ ಚುನಾವಣೆ ವೇಳೆಗೆ ಟಿಎಂಸಿಯಲ್ಲಿ ಅವರೊಬ್ಬರೇ ಉಳಿದಿರುತ್ತಾರೆ’ ಎಂದು ಹೇಳುವ ಮೂಲಕ ಅವರು, ಇನ್ನೂ ಹಲವರು ಬಿಜೆಪಿ ಸೇರುವ ಮುನ್ಸೂಚನೆ ನೀಡಿದರು.
‘ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಸರ್ಕಾರ ರಚಿಸಲಿದ್ದು, ರಾಜ್ಯವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವುದು’ ಎಂದರು.
‘ತೃಣಮೂಲ ಕಾಂಗ್ರೆಸ್ ಯಾವಾಗಲೂ ‘ಮಾ, ಮಾಟಿ, ಮಾನುಷ್’ (ತಾಯಿ, ಭೂಮಿ ಹಾಗೂ ಜನರು) ಎಂಬ ಘೋಷಣೆ ಹಾಕುತ್ತದೆ. ಅದರಂತೆ ನಡೆಯುವುದಿಲ್ಲ. ಅದು ಸುಲಿಗೆ, ಭ್ರಷ್ಟಾಚಾರ ಹಾಗೂ ಓಲೈಕೆ ರಾಜಕಾರಣದಲ್ಲಿಯೇ ಮುಳುಗಿದೆ’ ಎಂದು ಶಾ ಟೀಕಿಸಿದರು.
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ‘ಜನ ಕಲ್ಯಾಣ’ ಎಂಬ ತತ್ವದಡಿ ಕಾರ್ಯ ನಿರ್ವಹಿಸುತ್ತಿದ್ದರೆ, ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಮಾತ್ರ ‘ಸೋದರಳಿಯ ಕಲ್ಯಾಣ’ ಎಂಬ ಮಂತ್ರ ಜಪಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.