ನವದೆಹಲಿ: ಭೂ ಮತ್ತು ಸಾಗರ ಗಡಿ ಭದ್ರತೆಗೆ ಒತ್ತು ನೀಡಲಾಗುತ್ತಿದ್ದು, ಈ ವಿಚಾರದಲ್ಲಿ ಸಡಿಲಿಕೆಯನ್ನು ಒಪ್ಪಲಾಗದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿಯ (ಬಿಪಿಆರ್ಡಿ)51ನೇ ಸಂಸ್ಥಾಪನಾ ದಿನದ ಅಂಗವಾಗಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ʼಭೂ ಮತ್ತು ಸಾಗರ ಗಡಿಗಳು ಸುರಕ್ಷಿತವಾಗಿರಬೇಕು. ಈ ಕ್ಷೇತ್ರಗಳಲ್ಲಿ ಸಡಿಲಿಕೆಇರಬಾರದುʼ ಎಂದು ತಿಳಿಸಿದ್ದಾರೆ.
ಮುಂದುವರಿದು,ʼಪ್ರಜಾಪ್ರಭುತ್ವವೆಂದರೆ, ಜನರು ನಾಯಕರನ್ನು ಚುನಾಯಿಸುವುದಷ್ಟೇ ಅಲ್ಲ. ಚುನಾಯಿತರಾದ ನಾಯಕರು ನಾಗರಿಕರಿಗೆ ಭದ್ರತೆಯನ್ನೂ ಒದಗಿಸಬೇಕು. ಪ್ರಜಾಪ್ರಭುತ್ವದ ಪ್ರಗತಿಗೆ ಇದರಿಂದ ನೆರವಾಗಲಿದೆʼ ಎಂದಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ಅನುಕೂಲವಾಗುವಂತೆ ಪೊಲೀಸ್ ಸಂಸ್ಥೆಗಳ ನಡುವೆ ಸಂಪರ್ಕ ಕಲ್ಪಿಸುವಲ್ಲಿ ಬಿಪಿಆರ್ಡಿ ಪಾತ್ರ ಮುಖ್ಯವಾದುದು ಎಂದು ಶಾ ಅಭಿಪ್ರಾಯಪಟ್ಟಿದ್ದಾರೆ.
ʼಪೊಲೀಸರು ಕಠಿಣ ಕೆಲಸ ಮಾಡುತ್ತಾರೆ. ದೀಪಾವಳಿ, ರಕ್ಷಾಬಂಧನ ಮತ್ತು ಇನ್ನಿತರೆ ಸಂದರ್ಭಗಳಲ್ಲಿಯೂ ಅವರಿಗೆ ರಜೆ ತೆಗೆದುಕೊಳ್ಳಲು ಸಾಧ್ಯವಾಗದು. ಸರ್ಕಾರಿನೌಕರರ ಪೈಕಿ ಪೊಲೀಸರು ಎಲ್ಲರಿಗಿಂತ ಕಠಿಣ ಕೆಲಸ ಮಾಡುತ್ತಾರೆ ಎಂದುಭಾವಿಸುತ್ತೇನೆʼ ಎಂದೂ ಹೇಳಿದ್ದಾರೆ.