ನವದೆಹಲಿ: ಭಾರತ–ಬಾಂಗ್ಲಾ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಣೆ ಕುರಿತು ಚರ್ಚಿಸುವ ಉದ್ದೇಶದಿಂದ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರು ಐದು ದಿನಗಳ ಭೇಟಿಗಾಗಿ ಬಾಂಗ್ಲಾದೇಶಕ್ಕೆ ಗುರುವಾರ ತೆರಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶ ಪ್ರವಾಸ ಕೈಗೊಂಡ ಎರಡು ವಾರಗಳ ನಂತರ ಜನರಲ್ ನರವಣೆ ಅವರು ಆ ದೇಶಕ್ಕೆ ಭೇಟಿ ನೀಡುತ್ತಿರುವುದು ಗಮನಾರ್ಹ.
ಬಾಂಗ್ಲಾ ವಿಮೋಚನೆಗಾಗಿ ನಡೆದ ಹೋರಾಟದಲ್ಲಿ ಹುತಾತ್ಮರಾದವರಿಗೆ ಜ.ನರವಣೆ ಅವರುಗುರುವಾರ ಗೌರವ ಸಲ್ಲಿಸಲಿದ್ದಾರೆ. ನಂತರ ಬಾಂಗ್ಲಾದ ಮೂರು ಮಿಲಿಟರಿ ಸೇವೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸುವರು. ಏಪ್ರಿಲ್ 11 ರಂದು ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
‘ಏಪ್ರಿಲ್ 8 ರಿಂದ 12ರವರೆಗಿನ ಈ ಬಾಂಗ್ಲಾ ಭೇಟಿಯಲ್ಲಿ ಉಭಯ ದೇಶಗಳ ರಕ್ಷಣಾ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಲಾಗುತ್ತದೆ’ ಎಂದು ಸೇನಾ ವಕ್ತಾರ ಕರ್ನಲ್ ಅಮನ್ ಆನಂದ್ ತಿಳಿಸಿದರು.