ನವದೆಹಲಿ: ದೆಹಲಿಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಭಗತ್ ಸಿಂಗ್ ಚಿತ್ರಗಳನ್ನು ಅಳವಡಿಸಬೇಕು. ಯಾವುದೇ ರಾಜಕೀಯ ನಾಯಕರ ಚಿತ್ರಗಳು ಇರಬಾರದು ಎಂದು ಆದೇಶಿಸಿರುವುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಸರ್ಕಾರದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೇಜ್ರಿವಾಲ್ ಈ ಕುರಿತು ಘೋಷಣೆ ಮಾಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಖ್ಯಮಂತ್ರಿಗಳ ಚಿತ್ರವೂ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ದಲಿತ ಕುಟುಂಬದಲ್ಲಿ ಜನಿಸಿ, ದೇಶದ ಸಂವಿಧಾನದ ಕರಡು ರಚಿಸಿದ ಅಂಬೇಡ್ಕರ್ ಅವರಿಂದ ಅತಿಹೆಚ್ಚು ಪ್ರಭಾವಿತನಾಗಿದ್ದೇನೆ. ಅದೇ ರೀತಿ ಕ್ರಾಂತಿಕಾರಿ ನಾಯಕ ಭಗತ್ ಸಿಂಗ್ ಅವರಿಂದಲೂ ಪ್ರಭಾವಿತನಾಗಿದ್ದೇನೆ. ಇವರಿಬ್ಬರ ತತ್ವಾದರ್ಶಗಳಲ್ಲೇ ದೆಹಲಿ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದ್ದಾರೆ.
100 ವರ್ಷಗಳ ಹಿಂದೆ, ಅಂತರ್ಜಾಲ ಸಂಪರ್ಕವೂ ಇಲ್ಲದ ಕಾಲದಲ್ಲಿ ಅಂಬೇಡ್ಕರ್ ಅವರು ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಹಾಗೂ ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್ಗೆ ಅರ್ಜಿ ಸಲ್ಲಿಸಿ ಅಧ್ಯಯನಕ್ಕೆ ತೆರಳಿದ್ದರು ಎಂಬುದನ್ನು ಯೋಚಿಸುವಾಗಲೆಲ್ಲ ನಾನು ಚಕಿತನಾಗುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಬಳಿಕ ದೇಶದ ಸಂವಿಧಾನವನ್ನು ರೂಪಿಸುವಲ್ಲಿಯೂ ಅವರು ಬಹುಮುಖ್ಯ ಪಾತ್ರವಹಿಸಿದ್ದಾರೆ. ದೇಶದ ಮೊದಲ ಕಾನೂನು ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು ಎಂದು ಕೇಜ್ರಿವಾಲ್ ನೆನಪಿಸಿಕೊಂಡಿದ್ದಾರೆ.