ಗುವಾಹಟಿ: ‘ಅಸ್ಸಾಂ ದೋಣಿ ದುರಂತಕ್ಕೆ ಸಂಬಂಧಿಸಿದಂತೆ ಒಳನಾಡು ಜಲ ಸಾರಿಗೆ ಇಲಾಖೆಯ (ಐಡಬ್ಲ್ಯುಟಿ) ಆರು ಸಿಬ್ಬಂದಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಭಾನುವಾರ ತಿಳಿಸಿದರು.
ಸೆಪ್ಟೆಂಬರ್ 8ರಂದು ಜೊರ್ಹಾತ್ ಜಿಲ್ಲೆಯ ನಿಮತಿ ಘಾಟ್ ಬಳಿ ಖಾಸಗಿ ದೋಣಿ ‘ಮ ಕಮಲಾ’, ಸರ್ಕಾರಿ ಸ್ವಾಮ್ಯದ ದೋಣಿಗೆ ಡಿಕ್ಕಿ ಹೊಡೆದಿತ್ತು. ಇದರಲ್ಲಿ ಇಬ್ಬರು ಮೃತಪಟ್ಟಿದ್ದು, ಒಬ್ಬ ನಾಪತ್ತೆಯಾಗಿದ್ದಾರೆ.
‘ಖಾಸಗಿ ದೋಣಿಯ ಮೂವರು ಕೆಲಸಗಾರರನ್ನು ವಿಚಾರಿಸುತ್ತಿದ್ದೇವೆ. ಇನ್ನೂ ಕೆಲವು ಅಧಿಕಾರಿಗಳಿಗೆ ಹೇಳಿಕೆ ದಾಖಲಿಸುವಂತೆ ಸಮನ್ಸ್ ಜಾರಿ ಮಾಡಿದ್ದೇವೆ’ ಎಂದು ಜೊರ್ಹಾತ್ನ ಪೊಲೀಸ್ ವರಿಷ್ಠಾಧಿಕಾರಿ ಅಂಕುರ್ ಜೈನ್ ಅವರು ತಿಳಿಸಿದರು.
‘ಐಡಬ್ಲ್ಯುಟಿಯ ಆರು ಸಿಬ್ಬಂದಿ ನಿಯಮಗಳನ್ನು ಅನುಸರಿಸದೇ, ತಪ್ಪನ್ನು ಮಾಡಿದ್ದಾರೆ. ಈ ದುರಂತವನ್ನು ತಪ್ಪಿಸಬಹುದಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನುನಿಮತಿ ಘಾಟ್ನಿಂದ ಬಂಧಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
‘ಸದ್ಯ ನಾವು ಅಪಘಾತ ಹೇಗೆ ಸಂಭವಿಸಿರಬಹುದು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಘಟನಾ ಸನ್ನಿವೇಶನವನ್ನು ಪುನರ್ರಚಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅವರು ಹೇಳಿದರು.