ಧೇಮಾಜಿ: ಸ್ವಾತಂತ್ರ್ಯಾನಂತರದಲ್ಲಿ ದಶಕಗಳ ಕಾಲ ದೇಶವನ್ನು ಆಳಿದ ಸರ್ಕಾರಗಳು ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳನ್ನು ನಿರ್ಲಕ್ಷ್ಯಿಸಿವೆ ಎಂದು ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಈ ಪ್ರದೇಶಗಳ ಅಭಿವೃದ್ಧಿಗೆ ತಮ್ಮ ಸರ್ಕಾರ ಬದ್ಧವಾಗಿದೆ‘ ಎಂದು ಹೇಳಿದ್ದಾರೆ.
ಅಸ್ಸಾಂನ ಧೇಮಾಜಿ ಜಿಲ್ಲೆಯ ಸಿಲಾಪತಾರ್ನಲ್ಲಿ ಪೆಟ್ರೋಲಿಯಂ ಕ್ಷೇತ್ರದ ಮೂರು ಪ್ರಮುಖ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಮೋದಿಯವರು, ಕಳೆದ ಕೆಲವು ವರ್ಷಗಳಿಂದ ರಾಜ್ಯದ ಅಭಿವೃದ್ಧಿಗಾಗಿ ಸರ್ಬಾನಂದ ಸೊನೊವಾಲ್ ನೇತೃತ್ವದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರು. ‘ಈ ಪ್ರದೇಶದ ಸಮತೋಲಿತ ಅಭಿವೃದ್ಧಿಗೆ ತಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ‘ ಎಂದು ಹೇಳಿದರು.
₹3300 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮೋದಿ ಅವರು ‘ಸ್ವಾತಂತ್ರ್ಯಾ ನಂತರ ದಶಕಗಳಿಂದ ಆಳ್ವಿಕೆ ಮಾಡಿಕೊಂಡು ಬಂದವರು ಡಿಸ್ಪೂರ್ ದೆಹಲಿಯಿಂದ ಬಹಳ ದೂರವಿದೆ ಎಂದು ನಂಬಿದ್ದರು. ಆದರೆ, ಈಗ ದೆಹಲಿ ದೂರ ಉಳಿದಿಲ್ಲ, ನಿಮ್ಮ ಮನೆ ಬಾಗಿಲಲ್ಲೇ ಇದೆ‘ ಎಂದು ಹೇಳಿದರು.
ಹಿಂದಿನ ಸರ್ಕಾರಗಳು ಅಸ್ಸಾಂ ಅಭಿವೃದ್ದಿ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದವು. ಸಂಪರ್ಕ, ಆರೋಗ್ಯ, ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ನಿರ್ಲಕ್ಷಿಸಿದ್ದವು ಎಂದು ಅವರು ಆರೋಪಿಸಿದರು.
ಮಾರ್ಚ್ ಮೊದಲ ವಾರದಲ್ಲಿ ಚುನಾವಣೆ ಘೋಷಣೆಯಾಗುವ ಮುನ್ನ ಅಸ್ಸಾಂ ಸೇರಿದಂತೆ, ಚುನಾವಣೆ ನಡೆಯುವ ಇತರ ರಾಜ್ಯಗಳಿಗೆ ಭೇಟಿ ನೀಡುವುದಾಗಿ ತಿಳಿಸಿದರು.