ಔರಂಗಾಬಾದ್/ಮುಂಬೈ : ಮಸೀದಿಗಳ ಮೇಲಿರುವ ಧ್ವನಿವರ್ಧಕಗಳನ್ನು ಇದೇ 4ರೊಳಗೆ ತೆರವುಗೊಳಿಸಬೇಕು ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ಅವರ ವಿರುದ್ಧ ಔರಂಗಾಬಾದ್ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.
ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕ ರಜನೀಶ್ ಸೇಠ್ ಅವರು ರಾಜ್ ಠಾಕ್ರೆ ವಿರುದ್ಧ ಔರಂಗಾಬಾದ್ ಪೊಲೀಸ್ ಕಮಿಷನರ್ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ ಬೆನ್ನಲ್ಲೇ, ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ನಗರ ಚೌಕ್ ಪೊಲೀಸರು ಠಾಕ್ರೆ ವಿರುದ್ಧ ಐಪಿಸಿ ಕಲಂ 153, 116 ಮತ್ತು 117ರ ಹಾಗೂ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಔರಂಗಾಬಾದ್ನಲ್ಲಿ ಭಾನುವಾರ ನಡೆದಿದ್ದ ರ್ಯಾಲಿಯಲ್ಲಿರಾಜ್ ಠಾಕ್ರೆ ಅವರು ‘ಮೇ 4ರೊಳಗೆ ಮಸೀದಿಗಳ ಮೇಲಿರುವ ಧ್ವನಿವರ್ಧಕಗಳನ್ನು ತೆಗೆಯಬೇಕು. ಇಲ್ಲದಿದ್ದರೆ ಮಸೀದಿಗಳ ಎದುರು ಹನುಮಾನ್ ಚಾಲೀಸಾ ಪಠಣ ಆರಂಭಿಸುತ್ತೇವೆ’ ಎಂದು ಹೇಳಿಕೆ ನೀಡಿದ್ದರು. ಈ ರ್ಯಾಲಿಯ ಸಂಘಟಕರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ವಿವರಿಸಿದರು.