ನವದೆಹಲಿ:ಕೋವಿಡ್ ಲಸಿಕೆ ಕೊವ್ಯಾಕ್ಸಿನ್ ತಯಾರಿಕಾ ಕಂಪನಿ ಭಾರತ್ ಬಯೋಟೆಕ್ನ ಅಧ್ಯಕ್ಷ ಕೃಷ್ಣ ಎಲ್ಲ ಅವರಿಗೆ ಕೇಂದ್ರ ಸರ್ಕಾರವು ‘ವೈ’ ಶ್ರೇಣಿಯ ಭದ್ರತೆ ಒದಗಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷ್ಣ ಅವರು ಭಾರತ್ ಬಯೋಟೆಕ್ನ ಸಂಸ್ಥಾಪಕರೂ ಆಗಿದ್ದಾರೆ. ಔಷಧ ಕಂಡುಹಿಡಿಯುವುದು, ಔಷಧ ಅಭಿವೃದ್ಧಿಪಡಿಸುವಿಕೆ, ಅನೇಕ ಲಸಿಕೆಗಳ ಉತ್ಪಾದನೆ ಸೇರಿದಂತೆ ಹಲವು ಆರೋಗ್ಯ ಉತ್ಪನ್ನಗಳ ತಯಾರಿಕೆಯಲ್ಲಿ ಕಂಪನಿ ತೊಡಗಿಕೊಂಡಿದೆ.
ಜೀವ ರಕ್ಷಕ ಲಸಿಕೆಗಳು ಮತ್ತು ಅಗತ್ಯ ಔಷಧ ಉತ್ಪಾದನೆಯ ಕಾರಣ ಕೃಷ್ಣ ಅವರಿಗೆ ಭದ್ರತೆ ಒದಗಿಸಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಸಶಸ್ತ್ರ ಕಮಾಂಡೊಗಳು ಅವರಿಗೆ ಭದ್ರತೆ ಒದಗಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ವೈ’ ಶ್ರೇಣಿ ಭದ್ರತೆಯ ಮಾನದಂಡಗಳಿಗೆ ಅನುಸಾರವಾಗಿ ಕೃಷ್ಣ ಅವರು ದೇಶದ ಯಾವುದೇ ಭಾಗಕ್ಕೆ ತೆರಳುವುದಿದ್ದರೂ ಮೂವರು ಕಮಾಂಡೊಗಳು ಅವರ ಜತೆಗಿರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆಲಂಗಾಣದ ಶಮೀರ್ಪೇಟ್ ಪ್ರದೇಶದಲ್ಲಿರುವ ಭಾರತ್ ಬಯೋಟೆಕ್ಗೆ ಇತ್ತೀಚೆಗೆ ಗೃಹ ಸಚಿವಾಲಯದ ಅನುಮೋದನೆ ಬಳಿಕ ಅರೆಸೇನಾ ಪಡೆ ಭದ್ರತೆ ಒದಗಿಸಲಾಗಿದೆ.