ಪಟ್ನಾ/ಸಾರಣ್: ಬಿಹಾರದ ಸಾರಣ್ ಜಿಲ್ಲೆಯಲ್ಲಿ ಸಂಭವಿಸಿದ ಕಳ್ಳಬಟ್ಟಿ ಸಾರಾಯಿ ದುರಂತಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಒಟ್ಟು 38 ಮಂದಿಯ ಸಾವಿಗೆ ಕಾರಣವಾಗಿದ್ದ ಈ ಘಟನೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ ವಿಶೇಷ ಪೊಲೀಸ್ ತನಿಖಾ ತಂಡವು, ದುರಂತದ ‘ಮಾಸ್ಟರ್ ಮೈಂಡ್’ ಎನ್ನಲಾದ ಪ್ರಮುಖ ಆರೋಪಿ ಹೋಮಿಯೋಪಥಿ ಕಾಂಪೌಂಡರ್ನನ್ನು ಬಂಧಿಸಿದೆ’ ಎಂದು ಸಾರಣ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಮಾಹಿತಿ ನೀಡಿದ್ದಾರೆ.
‘ಉತ್ತರಪ್ರದೇಶದಿಂದ ರಾಸಾಯನಿಕಗಳನ್ನು ಸಾಗಿಸಲು ಹಾಗೂ ಸಾರಣ್ ಜಿಲ್ಲೆಗೆ ಸಾರಾಯಿಯನ್ನು ಸರಬರಾಜು ಮಾಡಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ನಕಲಿ ಮದ್ಯವನ್ನು ತಯಾರಿಸಲು ಬಳಸಲಾಗಿದ್ದ ರಾಸಾಯನಿಕಗಳ ಖಾಲಿ ಬಾಟಲಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.
ಈ ಹಿಂದೆ ಘಟನೆಗೆ ಸಂಬಂಧಿಸಿದಂತೆ ಎಸ್ಐಟಿ ಒಂಬತ್ತು ಜನರನ್ನು ಬಂಧಿಸಿತ್ತು.