ನವದೆಹಲಿ: ಬಯೋಕಾನ್ ಕಂಪನಿ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ದೇಶದಲ್ಲಿನ ಕೋವಿಡ್–19 ಲಸಿಕೆ ಕಾರ್ಯಕ್ರಮವನ್ನು ಹಿರಿಯರು ನಿಶ್ಚಯಿಸಿ ಮಾಡಿದ ಮದುವೆಗೆ ಎಂದು ಹೋಲಿಸಿದ್ದಾರೆ.
‘ಮೊದಲು ನೀವು ಮದುವೆಗೆ ಸಿದ್ಧರಿರಲಿಲ್ಲ. ಆಮೇಲೆ ಯಾರನ್ನೂ ಇಷ್ಟಪಡಲಿಲ್ಲ. ನಂತರ ನಿಮಗೆ ಯಾರೂ ಸಿಗುತ್ತಿಲ್ಲ ಎಂಬಂತಾಗಿದೆ’ ಎಂದು ಅವರು ಸದ್ಯ ಬಳಕೆಯಲ್ಲಿರುವ ಎರಡು ತಿಳಿ ಹಾಸ್ಯದ ಮಾತುಗಳನ್ನಾಡಿದ್ದಾರೆ.
‘ಬೇರೆಯವರು ಪಡೆದಿರುವುದು ಚೆನ್ನಾಗಿರಬಹುದು ಎಂದು ವಿಚಾರ ಮಾಡುತ್ತಿರುವ ಕೆಲವರು, ತಾವು ಪಡೆದಿರುವುದರ ಬಗ್ಗೆ ಸಂತೋಷಪಡುತ್ತಿಲ್ಲ. ಯಾವುದನ್ನೂ ಪಡೆಯದೇ ಇರುವವರು, ಶೀಘ್ರವೇ ಯಾವುದಾದರೊಂದನ್ನು ಪಡೆಯಲು ಹಾತೊರೆಯುತ್ತಿದ್ದಾರೆ’ ಎಂದು ಅವರು ಲಸಿಕೆಗಳ ಕುರಿತು ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಉದ್ಭವಿಸಿದ ಲಸಿಕೆ ಕೊರತೆ ಕುರಿತಂತೆ ಕಳೆದ ವಾರ ಪ್ರತಿಕ್ರಿಯಿಸಿದ್ದ ಅವರು, ಲಸಿಕೆ ಲಭ್ಯತೆ ಕುರಿತಂತೆ ಸರ್ಕಾರ ಪಾರದರ್ಶಕವಾಗಿರಬೇಕು. ಇದರಿಂದ ಜನರಿಗಾಗುವ ತೊಂದರೆಯನ್ನು ತಪ್ಪಿಸಬೇಕು ಎಂದು ಹೇಳಿದ್ದರು.