ಠಾಣೆ: ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಠಾಣೆ ಮಹಾನಗರ ಪಾಲಿಕೆಯು ಪರಿಸ್ಥಿತಿಮೇಲೆ ನಿಗಾ ವಹಿಸಲು ಕಂಟ್ರೋಲ್ ರೂಂ ಸ್ಥಾಪಿಸಿದೆ. ಅಲ್ಲದೆ ನಗರದಲ್ಲಿ ಎಲ್ಲಿಯಾದರೂ ಪಕ್ಷಿಗಳು ಮೃತಪಟ್ಟರೆ, ಕೂಡಲೇ ಮಾಹಿತಿ ನೀಡುವಂತೆ ಮನವಿ ಮಾಡಿದೆ.
ಮುಂಬೈ, ಠಾಣೆ, ದಾಪೊಲಿ, ಪರ್ಭಾನಿ ಮತ್ತು ಬೀಡ್ ಜಿಲ್ಲೆಯಲ್ಲಿ ಮೃತಪಟ್ಟ ಕಾಗೆಗಳ ಮಾದರಿಗಳನ್ನು ಭೋಪಾಲ್ ಮೂಲದನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್(ಐಸಿಆರ್–ಎನ್ಐಎಚ್ಎಸ್ಎಡಿ) ಇಲ್ಲಿಗೆ ಕಳುಹಿಸಲಾಗಿದೆ.
ಪರಿಸ್ಥಿತಿಯ ಮೇಲೆ ನಿಗಾವಹಿಸಲು ನಾಗರಿಕ ಸಂಸ್ಥೆಯ ಪಶುವೈದ್ಯಕೀಯ ವಿಭಾಗದ ಮುಖ್ಯಸ್ಥರ ಮೇಲ್ವಿಚಾರಣೆಯಲ್ಲಿ ಕಂಟ್ರೋಲ್ ರೂಂ ಅನ್ನು ಸ್ಥಾಪಿಸಲಾಗಿದೆ ಎಂದು ಠಾಣೆ ಮಹಾನಗರ ಪಾಲಿಕೆಯು (ಟಿಎಂಸಿ) ಸೋಮವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
‘ಜನರ ಮನಸ್ಸಿನಲ್ಲಿ ಹಕ್ಕಿ ಜ್ವರದ ಭಯ ಮನೆ ಮಾಡಿದೆ. ಮೊದಲು ಆ ಭಯವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ. ಈ ಬಗ್ಗೆ ಸಮಯಕ್ಕೆ ಸರಿಯಾಗಿ ಜನರಿಗೆ ಮಾಹಿತಿ ನೀಡುತ್ತೇವೆ ’ ಎಂದು ಪಾಲಿಕೆ ಹೇಳಿದೆ.
ಪರ್ಭಾನಿ ಜಿಲ್ಲೆಯ ಕೋಳಿ ಫಾರ್ಮ್ನೊಂದರಲ್ಲಿ ಮೃತಪಟ್ಟ 900 ಕೋಳಿಗಳಿಗೆ ಹಕ್ಕಿ ಜ್ವರ ತಗುಲಿರುವುದು ಸೋಮವಾರ ದೃಢಪಟ್ಟಿದೆ. ಅದರ ಬೆನ್ನಲ್ಲೇ ಪರಿಸ್ಥಿತಿ ನಿರ್ವಹಣೆಗಾಗಿ ಕಂಟ್ರೋಲ್ ರೂಂ ಅನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.