ನವದೆಹಲಿ: ಕೇವಲ ಎರಡು ಲೋಕಸಭಾ ಸದಸ್ಯರನ್ನು ಹೊಂದಿದ್ದ ಬಿಜೆಪಿಯು ಇಂದು ದೇಶದ ಪ್ರತಿ ಮೂಲೆಯಲ್ಲಿಯೂ ತನ್ನ ಅಸ್ತಿತ್ವ ಪಡೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಿಹಾರ ವಿಧಾನಸಭಾ ಚುನಾವಣೆ ಹಾಗೂ ವಿವಿಧ ರಾಜ್ಯಗಳ ಉಪಚುನಾವಣೆಗಳಲ್ಲಿ ಪಕ್ಷವು ಅಭೂತಪೂರ್ವ ಸಾಧನೆ ಮಾಡಿದೆ. ಆ ಹಿನ್ನೆಲೆಯಲ್ಲಿ ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತನಾಡಿದರು.
'ಅಭಿವೃದ್ಧಿಗೋಸ್ಕರ ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಮಾತ್ರ ಜನರು ಈಗ ಬೆಂಬಲಿಸುತ್ತಾರೆ ಎಂಬುದನ್ನು ಚುನಾವಣಾ ಫಲಿತಾಂಶಗಳು ಸ್ಪಷ್ಟಪಡಿಸಿವೆ' ಎಂದು ಮೋದಿ ತಿಳಿಸಿದರು.
'21ನೇ ಶತಮಾನದಲ್ಲಿ ಅಭಿವೃದ್ಧಿಯೇ ರಾಷ್ಟ್ರೀಯ ರಾಜಕಾರಣದ ಆಧಾರ ಎಂಬುದನ್ನು ಜನರು ನಿರ್ಧರಿಸಿದ್ದಾರೆ. ಬಿಜೆಪಿಯಲ್ಲಿ ಬಡವರು, ದಲಿತರು, ವಂಚಿತರು ತಮ್ಮ ಪ್ರಾತಿನಿಧ್ಯವನ್ನು ಪಡೆದಿದ್ದಾರೆ' ಎಂದು ಮೋದಿ ಹೇಳಿದರು.
'ಕೋವಿಡ್ ಸಾಂಕ್ರಾಮಿಕವನ್ನು ನಾವು ನಿಭಾಯಿಸಿದ ರೀತಿಗೆ ಜನರು ಅನುಮೋದಿಸಿದ್ದಾರೆ. ಅದು ಚುನಾವಣಾ ಫಲಿತಾಂಶಗಳಲ್ಲಿ ಕಂಡುಬಂದಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮಹಿಳೆಯರು ಬಿಜೆಪಿಯ ಮೌನ ಮತದಾರರಾಗಿ ಪರಿವರ್ತನೆಗೊಂಡಿದ್ದಾರೆ' ಎಂದು ಪ್ರಧಾನಿ ತಿಳಿಸಿದರು.