ಮುಂಬೈ: ಕಾಂಗ್ರೆಸ್ನ ಹಿರಿಯ ನಾಯಕರಾದ ಪಂಡಿತ್ ಜವಹರಲಾಲ್ ನೆಹರು, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ನೆನಪುಗಳನ್ನು ಬಿಜೆಪಿ ಅಳಿಸಿಹಾಕಲು ಇಚ್ಛಿಸುತ್ತಿದೆ. ಅಲ್ಲದೇ,ನೆಹರು–ಗಾಂಧಿ ವಂಶಾವಳಿಯ ಗೌರವವನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ ಎಂದು ಶಿವಸೇನಾ ಆರೋಪಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿರುವುದರ ಕುರಿತು, ಶಿವಾಸೇನಾವು ತನ್ನ ಮುಖವಾಣಿಯಾದ ‘ಸಾಮ್ನಾ’ದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
‘ರಾಹುಲ್ ಅವರನ್ನು ಪ್ರಶ್ನಿಸುವುದರ ಮೂಲಕ ಬಿಜೆಪಿಯು, ಯಾವುದೇ ವ್ಯಕ್ತಿ, ಎಷ್ಟೇ ಶಕ್ತಿಶಾಲಿಯಾಗಿದ್ದರೂ ತಾನು ಯಾರ ಕೊರಳ ಪಟ್ಟಿಯನ್ನಾದರೂ ಹಿಡಿಯಬಹುದು ಎಂದು ತೋರಿಸುತ್ತಿದೆ. ಇದು ಅಧಿಕಾರದ ದುರಹಂಕಾರ’ ಎಂದು ಸಾಮ್ನಾದ ಸಂಪಾದಕೀಯದಲ್ಲಿ ಶಿವಸೇನಾ ಹೇಳಿದೆ.