ಜೈಪುರ, ರಾಜಸ್ಥಾನ (ಪಿಟಿಐ): ಬಿಜೆಪಿಯು ತಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಕಳೆದ ವರ್ಷ ಆರೋಪ ಮಾಡಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿಯು ಎಂದಿಗೂ ರಾಜಸ್ಥಾನ ಸರ್ಕಾರವನ್ನು ಉರುಳಿಸುವುದಿಲ್ಲ. ಬದಲು 2023ರ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂದು ಹೇಳಿದ್ದಾರೆ.
‘ತಮ್ಮ ಸರ್ಕಾರ ಯಾವಾಗ ಅಧಿಕಾರ ಕಳೆದುಕೊಳ್ಳುವುದೋ ಎಂದು ಅವರು ಯಾವಾಗಲೂ ಭೀತಿಯಲ್ಲೇ ಇರುತ್ತಾರೆ. ಅವರ ಸರ್ಕಾರವನ್ನು ಬೀಳಿಸಲು ಯಾರು ಹೊರಟಿದ್ದಾರೆ? ಬಿಜೆಪಿ ಎಂದೂ ಅಂತಹ ಪ್ರಯತ್ನ ನಡೆಸುವುದಿಲ್ಲ. ಪಕ್ಷವು ಜನರ ನಡುವೆ ಹೋಗುತ್ತದೆ. 2023ರ ಚುನಾವಣೆಯಲ್ಲಿ ಬಹುಮತದಿಂದ ಅಧಿಕಾರಕ್ಕೆ ಬರಲಿದೆ’ ಎಂದು ಇಲ್ಲಿ ನಡೆದ ಬಿಜೆಪಿ ಸಂಸದರು ಮತ್ತು ಶಾಸಕರ ಸಭೆಯೊಂದರಲ್ಲಿ ಹೇಳಿದ್ದಾರೆ.