ಉದಲ್ಗುರಿ (ಅಸ್ಸಾಂ): ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟದ ಗೆಲುವಿಗೆ ಎಐಯುಡಿಎಫ್ ಜೊತೆಗಿನ ಕಾಂಗ್ರೆಸ್ ಒಪ್ಪಂದವು ಒಂದು ಅಂಶವಾಗಲಿದೆ. ಏಕೆಂದರೆ ಮತದಾರರು ಕೇಸರಿ ಪಕ್ಷವನ್ನು ನಿರ್ಣಾಯಕವಾಗಿ ಬೆಂಬಲಿಸುತ್ತಾರೆ ಎಂದು ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಧೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪಶ್ಚಿಮ ಬಂಗಾಳದಲ್ಲಿ ತಮ್ಮ ಪಕ್ಷಕ್ಕೆ ಭರ್ಜರಿ ಗೆಲುವು ಸಾಧಿಸುವ ಮುನ್ಸೂಚನೆ ಸಿಕ್ಕಿದ್ದು, ಅಲ್ಲಿನ ಜನರು ತೃಣಮೂಲ ಕಾಂಗ್ರೆಸ್ಸಿನ 'ದುರಾಡಳಿತ'ದಿಂದಾಗಿ ಬೇಸತ್ತು ಬದಲಾವಣೆಗಾಗಿ ಹಂಬಲಿಸುತ್ತಿದ್ದಾರೆ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಸ್ವೀಕರಿಸುತ್ತಾರೆ ಎಂದು ಪ್ರತಿಪಾದಿಸಿದರು.
ನಾವು ಬಂಗಾಳದಲ್ಲಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಮತ್ತು ಅಸ್ಸಾಂನಲ್ಲಿ ನಮ್ಮ ಸ್ಥಾನವನ್ನು ಇನ್ನಷ್ಟು ಸುಧಾರಿಸಿಕೊಳ್ಳುತ್ತೇವೆ' ಎಂದು ಅವರು ಹೇಳಿದರು.
2019 ರ ಲೋಕಸಭಾ ಚುನಾವಣೆಯ ನಂತರ ಪಕ್ಷವು ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಆದರೆ ಟಿಎಂಸಿಯ ಬೆಂಬಲ ನೆಲೆ ಸವೆದುಹೋಗಿದೆ, ಅದರ ಹೆಚ್ಚಿನ ಸಂಖ್ಯೆಯ ನಾಯಕರು ಪಕ್ಷವನ್ನು ತೊರೆದಿದ್ದಾರೆ. ಅವರಲ್ಲಿ ಹೆಚ್ಚಿನವರು ಬಿಜೆಪಿಗೆ ಸೇರಿದ್ದಾರೆ. ಗೆಲ್ಲುವ ವಿಶ್ವಾಸವೇ ಜನರಲ್ಲಿ ಇಲ್ಲದಿದ್ದಾಗಲೇ ನಾವು 2019 ರಲ್ಲಿ ಒಟ್ಟು 42 ರಲ್ಲಿ 18 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದೇವೆ ಮತ್ತು ಸಣ್ಣ ಅಂತರದಿಂದ ಮೂರು ಸ್ಥಾನಗಳನ್ನು ಕಳೆದುಕೊಂಡಿದ್ದೇವೆ. ಈಗ ನಾವು ಗೆಲ್ಲುತ್ತೇವೆಂಬ ವಿಶ್ವಾಸವಿದೆ. ಜನರು ಬದಲಾವಣೆಗಾಗಿ ಹಂಬಲಿಸುತ್ತಿದ್ದಾರೆ ಮತ್ತು ನಮ್ಮೊಂದಿಗಿದ್ದಾರೆ "ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮೋದಿಯನ್ನು ನೋಡಲು ಬಯಸುವುದಿಲ್ಲ. ಆದರೆ ಪ್ರಧಾನ ಮಂತ್ರಿಗಳ ರ್ಯಾಲಿಗಳ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಜನರು ಮೋದಿಯವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಮೂಲಕ ಅವರ ಬಗ್ಗೆ ಪ್ರೀತಿಯನ್ನು ತೋರಿಸುತ್ತಿದ್ದಾರೆ ಎಂದರು.
ಮಮತಾರ ಬಿಜೆಪಿಯ ವಿರುದ್ಧ ಧಾರ್ಮಿಕ ಧ್ರುವೀಕರಣದ ಆರೋಪದ ಬಗ್ಗೆ ಕೇಳಿದಾಗ, ಜನರ ಸಮಸ್ಯೆಗಳನ್ನು ಎತ್ತಿಹಿಡಿಯುವುದೇ ಧಾರ್ಮಿಕ ಧ್ರುವೀಕರಣಕ್ಕೆ ಸಮನಾಗಿದ್ದರೆ, ಇದು ಅವರು ಕೇಳಿದ 'ಹೊಸ ವ್ಯಾಖ್ಯಾನ' ವಾಗಿರುತ್ತದೆ. ಅವರ ಸರ್ಕಾರ ದುರ್ಗಾ ಪೂಜಾ ಮತ್ತು ಸರಸ್ವತಿ ಪೂಜಾ ಮೆರವಣಿಗೆಗಳನ್ನು ತಡೆದಾಗ, ಅದು ಧ್ರುವೀಕರಣವಲ್ಲವೇ ಎಂದು ಅವರು ಕೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.