ಭೋಪಾಲ್: ಸೌಹಾರ್ದ ಕ್ರಿಕೆಟ್ ಪಂದ್ಯದ ವೇಳೆ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಹೊಡೆದ ಚೆಂಡು ಬಿಜೆಪಿ ಕಾರ್ಯಕರ್ತರೊಬ್ಬರ ತಲೆಗೆ ತಗುಲಿ ಗಾಯಗೊಂಡ ಘಟನೆ ಇಲ್ಲಿ ಗುರುವಾರ ನಡೆದಿದೆ.
ಬೋಪಾಲ್ನ ತೌರಾದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗಿರುವ ಕ್ರಿಕೆಟ್ ಮೈದಾನದಲ್ಲಿ ಸೌಹಾರ್ದ ಪಂದ್ಯ ಆಡುವ ವೇಳೆ ಈ ಘಟನೆ ಸಂಭವಿಸಿದೆ.
ಸಿಂಧಿಯಾ ಅವರು ಬಾರಿಸಿದ ಚೆಂಡನ್ನು ವಿಕಾಶ್ ಮಿಶ್ರಾ ಎಂಬವರು ಹಿಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಕ್ಯಾಚ್ ಕೈ ತಪ್ಪಿ ಚೆಂಡು ಹಣೆಗೆ ಬಡಿದಿದೆ. ಹಣೆಗೆ ಗಾಯವಾಗಿ ರಕ್ತ ಸೋರಲು ಆರಂಭಿಸಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ಲಭಿಸಿದೆ.
ಗುರುವಾರ ಬೆಳಿಗ್ಗೆ ಕ್ರೀಡಾಂಗಣ ಉದ್ಘಾಟನೆಯಾಗಿದ್ದು, ಬಳಿಕ ಈ ಪಂದ್ಯ ನಡೆದಿದೆ.
ಘಟನೆ ನಡೆದ ಕೂಡಲೇ ಪಂದ್ಯ ರದ್ದು ಮಾಡಲಾಗಿದ್ದು, ಗಾಯಾಳು ವಿಕಾಸ್ ಅವರನ್ನು ಸಂಜಯ್ ಗಾಂಧಿ ಮೆಡಿಕಲ್ ಕಾಲೇಜಿಗೆ ಕರೆದೊಯ್ಯಲಾಗಿದೆ. ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ ಬಿಜೆಪಿ ನಾಯಕರು ಗಾಯಾಳುವನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ.