ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ‘ನವಭಾರತ’ದ ದೃಷ್ಟಿಕೋನವನ್ನು ದೇಶದಾದ್ಯಂತ ಕೊಂಡೊಯ್ಯಲು ಬಿಜೆಪಿಯ ಯುವ ಘಟಕವು ‘ಯುವ ಸಂಕಲ್ಪ ಯಾತ್ರೆ’ಯನ್ನು ವರ್ಷಪೂರ್ತಿ ಕೈಗೊಂಡಿದ್ದು, ಸ್ವಾತಂತ್ರ್ಯ ದಿನದಂದು ಯಾತ್ರೆಗೆ ಚಾಲನೆ ದೊರೆಯಲಿದೆ.
‘10 ಲಕ್ಷಕ್ಕೂ ಹೆಚ್ಚು ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಸ್ವಯಂಸೇವಕರು ಸಂಘಟನೆಯ 13,350 ಮಂಡಲಗಳಲ್ಲಿ ರಾಷ್ಟ್ರಗೀತೆಯ ಸಾಮೂಹಿಕ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ಆಗಸ್ಟ್ 15ರಂದು ಉದಯಪುರದಲ್ಲಿ ಯುವ ಸಂಕಲ್ಪ ಯಾತ್ರೆಯನ್ನು ಆರಂಭಿಸಲಾಗುವುದು’ ಎಂದು ಬಿಜೆವೈಎಂ ಅಧ್ಯಕ್ಷ ತೇಜಸ್ವಿ ಸೂರ್ಯ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಗುಜರಾತ್ನ ಪ್ರತಿ ವಿಧಾನಸಭಾ ಕ್ಷೇತ್ರ ಮತ್ತು ಕರ್ನಾಟಕದ 37 ಸ್ಥಳಗಳಲ್ಲಿ ಯಾತ್ರೆಯನ್ನು ಕೈಗೊಳ್ಳಲಾಗುವುದು. ಯಾತ್ರೆಯ ಅಂಗವಾಗಿ ಮೂರು ದಿನಗಳ ಮ್ಯಾರಥಾನ್ ನಡೆಯಲಿದೆ. ಅಂತೆಯೇ 75 ಸ್ಥಳಗಳಲ್ಲಿ 75 ಕಿ.ಮೀ.ಗಳ ಸೈಕಲ್ ರ್ಯಾಲಿಯನ್ನೂ ಆಯೋಜಿಸಲಾಗಿದೆ’ ಎಂದೂ ಅವರು ಹೇಳಿದರು