ಬಲಿಯಾ (ಉತ್ತರ ಪ್ರದೇಶ): ‘ಜೈಲಿನಲ್ಲಿರುವ ಬಿಎಸ್ಪಿ ಶಾಸಕ ಮುಖ್ತಾರ್ ಅನ್ಸಾರಿ ಅವರ ಪತ್ನಿ ತಮ್ಮ ಕುಟುಂಬಕ್ಕೆ ಭದ್ರತೆ ಕೋರಿ ರಾಷ್ಟ್ರಪತಿ ಅವರಿಗೆ ಪತ್ರ ಬರೆದಿದ್ದಾರೆ’ ಎಂದು ಅವರ ಸಹೋದರ, ಸಂಸದ ಅಫ್ಜಲ್ ಅನ್ಸಾರಿ ತಿಳಿಸಿದ್ದಾರೆ.
ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಜೈಲಿನಲ್ಲಿರುವ ಮುಖ್ತಾರ್ ಅನ್ಸಾರಿಯನ್ನು ಕೆಲವು ಸಮಯದಿಂದ ವಿವಿಧ ಪ್ರಕರಣಗಳ ವಿಚಾರಣೆಗಾಗಿ ಉತ್ತರ ಪ್ರದೇಶಕ್ಕೆ ಕರೆತರಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
‘ಪತಿ ಮತ್ತು ಪುತ್ರರ ಸುರಕ್ಷತೆ ದೃಷ್ಟಿಯಿಂದ ತನ್ನ ಪತಿಯ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಜೈಲಿನಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾಡಬೇಕು ಎಂದು ಮುಖ್ತಾರ್ ಪತ್ನಿ ಅಫ್ಶನ್ ಪತ್ರದಲ್ಲಿ ಮನವಿ ಮಾಡಿದ್ದಾರೆ’ ಎಂದು ತಿಳಿಸಿದರು.