ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಭಾರತ-ಬಾಂಗ್ಲಾದೇಶ ಅಂತರ ರಾಷ್ಟ್ರೀಯ ಗಡಿಯಲ್ಲಿ ಬಿಎಸ್ಎಫ್ ಯೋಧರ ಮೇಲೆ ದನ ಕಳ್ಳಸಾಗಣೆದಾರರು ಗುಂಡಿನ ದಾಳಿ ನಡೆಸಿದ್ದಾರೆ ಎಂಬುದನ್ನು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಮುಂಜಾನೆ ಘಟನೆ ನಡೆದಿದ್ದು, ಗಡಿಯಾಚೆಗಿನ ಕಳ್ಳಸಾಗಣೆಯ ವೇಳೆ ಕೃತ್ಯ ನಡೆದಿದೆ.
ಕೂಚ್ ಬೆಹಾರ್ ಜಿಲ್ಲೆಯ ಫಲಕತಾ ಸೆಕ್ಟೆರ್ನ ಪುತಿಯಾ ಬಾರಾಮಾಸಿಯಾ ಗಡಿ ಪೋಸ್ಟ್ ಬಳಿ ಭಾನುವಾರ ಮುಂಜಾನೆ 5.30ರ ಹೊತ್ತಿಗೆ ಗುಂಡಿನ ದಾಳಿ ನಡೆದಿದೆ. ಅದೃಷ್ಟವಶಾತ್ಬಿಎಸ್ಎಫ್ ಯೋಧರಿಗೆ ಯಾವುದೇ ಗಾಯಗಳಾಗಿಲ್ಲ.
ಬಾಂಗ್ಲಾದೇಶದ ಕಡೆಯಿಂದ 20-25 ದುಷ್ಕರ್ಮಿಗಳು ಮತ್ತು ಭಾರತೀಯ ಕಡೆಯಿಂದ 18-20 ಕಳ್ಳಸಾಗಾಣೆದಾರರ ಅನುಮಾನಾಸ್ಪದ ಚಲನೆಯನ್ನು ಬಿಎಸ್ಎಫ್ ಯೋಧರು ಗಮನಿಸಿದ್ದರು.
ಭಾರತದಿಂದ ಬಾಂಗ್ಲಾದೇಶಕ್ಕೆ ದನಗಳನ್ನು ಕಳ್ಳಸಾಗಣೆ ಮಾಡಲು ಎರಡೂ ಕಡೆಯವರು ಪ್ರಯತ್ನಿಸುತ್ತಿದ್ದರು. ಇವರನ್ನು ಚದುರಿಸಲು ಸೈನಿಕರು ಗ್ರೆನೇಡ್ ಹಾರಿಸಿದರು ಎಂದು ಅಧಿಕಾರಿಗಳು ತಿಳಿಸಿದರು.
ಭಾರತ ಮೂಲದ ಕಳ್ಳಸಾಗಾಣಿಕೆದಾರರು ಬಿಎಸ್ಎಫ್ ಮೇಲೆ ಗುಂಡು ಹಾರಿಸಿದರು. ತಕ್ಷಣ ಬಿಎಸ್ಎಫ್ ಯೋಧರು ಪ್ರತಿದಾಳಿ ನಡೆಸಿದರು. ಇದರಿಂದ ಬೆದರಿದ ದುಷ್ಕರ್ಮಿಗಳು ಪಾಲಾಯನಗೈದರು.