ನವದೆಹಲಿ: 12ನೇ ತರಗತಿ ಪೂರಕ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು ಪದವಿ ಕೋರ್ಸ್ಗೆ ತಾತ್ಕಾಲಿಕ ಪ್ರವೇಶ ಪಡೆಯುವ ಸಂಬಂಧ ಸಿಬಿಎಸ್ಇ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವೀಲ್ಕರ್, ದಿನೇಶ್ ಮಾಹೇಶ್ವರಿ, ಸಂಜೀವ್ ಖನ್ನಾ ಅವರಿರುವ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.
ಸೆ. 22ರಿಂದ 29ರ ವರೆಗೆ ಪೂರಕ ಪರೀಕ್ಷೆ ನಡೆಯಲಿವೆ. ಅಷ್ಟರೊಳಗೆ ಪದವಿ ಕೋರ್ಸ್ಗಳಿಗೆ ಪ್ರವೇಶ ಪ್ರಕ್ರಿಯೆ ಮುಕ್ತಾಯಗೊಳ್ಳುವುದು. ಹೀಗಾಗಿ ಪೂರಕ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗುವವರೆಗೆ ಪ್ರವೇಶ ಪ್ರಕ್ರಿಯೆ ಆರಂಭಿಸಬಾರದು. ಇಲ್ಲವೇ, ಈ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಪ್ರವೇಶ ನೀಡುವಂತೆ ಕಾಲೇಜುಗಳಿಗೆ ಸಿಬಿಎಸ್ಇ ತಿಳಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.
‘ಕಾಲೇಜು, ವಿಶ್ವವಿದ್ಯಾಲಯ ಹಾಗೂ ಡೀಮ್ಡ್ ವಿ.ವಿ.ಗಳು ಪದವಿ ಕೋರ್ಸ್ಗಳಿಗೆ ಪ್ರವೇಶ ನೀಡುತ್ತವೆ. ಹೀಗಾಗಿ ಸಿಬಿಎಸ್ಇ ಈ ವಿಷಯದಲ್ಲಿ ಪೂರಕ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳ ನೆರವಿಗೆ ಧಾವಿಸಲು ಸಾಧ್ಯ ಇಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
‘ಕೋವಿಡ್–19 ಪಿಡುಗಿನ ಕಾರಣ, ಸಿಬಿಎಸ್ಇ ಹೊಸ ಮೌಲ್ಯಮಾಪನ ಪದ್ಧತಿ ಅಳವಡಿಸಿಕೊಂಡು, ಅದರನ್ವಯ ಫಲಿತಾಂಶ ಪ್ರಕಟಿಸಿದೆ. ಹೀಗಾಗಿ ಬಹಳಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಈಗ ಪೂರಕ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ’ ಎಂದು ಸಿಬಿಎಸ್ಇ ಪರ ವಕೀಲ ವಿವರಿಸಿದರು.
ಇದಕ್ಕೆಪ್ರತಿಕ್ರಿಯಿಸಿದ ನ್ಯಾಯಪೀಠ, ‘87,000 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಈ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಒದಗಿಸುವುದು ಸಿಬಿಎಸ್ಇ ವ್ಯಾಪ್ತಿಗೆ ಬರದು’ ಎಂದು ಅಭಿಪ್ರಾಯಪಟ್ಟು, ವಿಚಾರಣೆಯನ್ನು ಸೆ. 14ಕ್ಕೆ ಮುಂದೂಡಿತು.