ಚಂಡೀಗಡ: ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಿಗೆ ರಾಜಧಾನಿಯಾಗಿರುವ ಚಂಡೀಗಡ ನಗರ ಪಾಲಿಕೆಯ ಚುನಾವಣೆ ಫಲಿತಾಂಶ ಇಂದು ಪ್ರಕಟಗೊಂಡಿದೆ.
ರಾಜ್ಯ ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಒಟ್ಟು 35 ವಾರ್ಡುಗಳಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 14 ಸ್ಥಾನಗಳನ್ನು ಗೆಲ್ಲುವ ಮೂಲಕ ದೊಡ್ಡ ಸಾಧನೆ ಮಾಡಿದೆ. ಬಿಜೆಪಿ 12 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 8 ಹಾಗೂ ಅಕಾಲಿ ದಳ 1 ವಾರ್ಡುಗಳಲ್ಲಿ ಜಯಿಸಿವೆ.
ಡಿಸೆಂಬರ್ 24 ರಂದು ಮತದಾನ ನಡೆದಿತ್ತು. ಇದೇ ಮೊದಲ ಬಾರಿಗೆ ಚಂಡೀಗಡ ನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ್ದ ಎಎಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದೆ.
ಇನ್ನು ಈ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಎಎಪಿ ನಾಯಕ ರಾಘವ ಚಡ್ಡಾ ಅವರು, ‘ಜನ ಅರವಿಂದ್ ಕೇಜ್ರಿವಾಲ್ ಅವರ ಆಡಳಿತವನ್ನು ಮೆಚ್ಚಿಕೊಂಡಿರುವುದಕ್ಕೆ ಈ ಫಲಿತಾಂಶ ಸಾಕ್ಷಿ. ಸದ್ಯ ಇದು ಟ್ರೈಲರ್ ಮಾತ್ರ, ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸಿನಿಮಾ ತೋರಿಸಲಿದ್ದೇವೆ’ ಎಂದು ಹೇಳಿದ್ದಾರೆ.
ಚಂಡೀಗಡ ನಗರ ಪಾಲಿಕೆ ಗದ್ದುಗೆ ಹಿಡಿಯಬೇಕಾದರೆ ಬಹುಮತಕ್ಕೆ 18 ಸ್ಥಾನ ಬೇಕು. ಇದೀಗ ಯಾರಿಗೂ ಬಹುಮತ ಬಂದಿಲ್ಲದಿರುವುದರಿಂದಜನರ ಕಣ್ಣು ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಬಿದ್ದಿದ್ದು, ಅವರು ಯಾರ ಜೊತೆ ಮೈತ್ರಿ ಮಾಡಿಕೊಳ್ಳಲಿದ್ದಾರೆ? ಎಂಬುದು ಕುತೂಹಲ ಮೂಡಿಸಿದೆ.
ಈ ಮೊದಲು ಚಂಡೀಗಡ ನಗರ ಪಾಲಿಕೆಯಲ್ಲಿ 27 ವಾರ್ಡ್ಗಳು ಮಾತ್ರ ಇದ್ದವು. ವಾರ್ಡ್ ಮರು ವಿಂಗಡಣೆ ನಂತರ 35ಕ್ಕೆ ಏರಿಕೆಯಾಗಿತ್ತು.ಚಂಡೀಗಡ ಭಾರತದ ಪ್ರಮುಖ ಯೋಜನಾಬದ್ಧ ನಗರವೆಂದು ಖ್ಯಾತಿ ಪಡೆದಿದೆ. ಇಲ್ಲಿನ ಜನಸಂಖ್ಯೆ 10.5 ಲಕ್ಷ ಇದೆ.