ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ಸಿಎಂ ಪಳನಿಸ್ವಾಮಿ ಕೇಂದ್ರ ಸರ್ಕಾರ ಬಯಸಿದ್ದನ್ನು ಮಾಡುತ್ತಾರೆ: ರಾಹುಲ್

Last Updated 1 ಮಾರ್ಚ್ 2021, 8:01 IST
ಅಕ್ಷರ ಗಾತ್ರ

ಕನ್ಯಾಕುಮಾರಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತೂತುಕುಡಿಯಲ್ಲಿ ನಡೆದ ರ‍್ಯಾಲಿ ವೇಳೆ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ವಿರುದ್ಧ ಕಿಡಿ ಕಾರಿದ್ದಾರೆ. ಪಳನಿಸ್ವಾಮಿ ರಾಜ್ಯವನ್ನು ಪ್ರತಿನಿಧಿಸುವುದಿಲ್ಲ. ಅವರು ಕೇಂದ್ರ ಸರ್ಕಾರದ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಏಪ್ರಿಲ್‌ 6ರಂದು ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಕನ್ಯಾಕುಮಾರಿಯಲ್ಲಿ ನಡೆದ ರೋಡ್‌ ಶೋನಲ್ಲಿ ಮಾತನಾಡಿರುವ ರಾಹುಲ್‌,ʼತಮಿಳು ಸಂಸ್ಕೃತಿಯನ್ನು ಅವಮಾನಿಸಲು ಅವರು (ಪಳನಿಸ್ವಾಮಿ) ಆರ್‌ಎಸ್‌ಎಸ್‌ಗೆ ಅವಕಾಶ ನೀಡಬಾರದು. ʼಒಂದು ದೇಶ, ಒಂದು ಸಂಸ್ಕೃತಿ, ಒಂದೇ ಇತಿಹಾಸʼ ಎಂದುಮೋದಿ ಹೇಳುತ್ತಾರೆ. ತಮಿಳು, ಭಾರತೀಯ ಭಾಷೆಯಲ್ಲವೇ? ತಮಿಳರ ಇತಿಹಾಸ ಭಾರತಕ್ಕೆ ಸೇರಿಲ್ಲವೇ? ಅಥವಾ ತಮಿಳು ಸಂಸ್ಕೃತಿ ಭಾರತದ್ದಲ್ಲವೇ? ಒಬ್ಬ ಭಾರತೀಯನಾಗಿ ತಮಿಳು ಸಂಸ್ಕೃತಿಯನ್ನು ರಕ್ಷಿಸುವುದು ನನ್ನ ಕರ್ತವ್ಯʼ ಎಂದುಹೇಳಿದ್ದಾರೆ.

ಮುಂದುವರಿದು,ʼದೆಹಲಿಯಲ್ಲಿರುವ ಸರ್ಕಾರ (ಕೇಂದ್ರ ಸರ್ಕಾರ) ತಮಿಳು ಸಂಸ್ಕೃತಿಯನ್ನು ಗೌರವಿಸುವುದಿಲ್ಲ. ಅವರು (ಕೇಂದ್ರ) ಹೇಳಿದ್ದನ್ನೆಲ್ಲ ಕೇಳುವ ಮುಖ್ಯಮಂತ್ರಿ ಇಲ್ಲಿದ್ದಾರೆ. ಸಿಎಂ (ಪಳನಿಸ್ವಾಮಿ) ರಾಜ್ಯವನ್ನು ಪ್ರತಿನಿಧಿಸುವುದಿಲ್ಲ. ಅವರು ತಮಿಳುನಾಡಿನಲ್ಲಿ ಏನು ಮಾಡಬೇಕೆಂದು ಮೋದಿ ಬಯಸುತ್ತಾರೋ ಅದನ್ನು ಪ್ರತಿನಿಧಿಸುತ್ತಾರೆ. ಪ್ರಧಾನಿ ಮೋದಿಯವರ ಮುಂದೆ ಕೈಕಟ್ಟಿನಿಲ್ಲುವ ವ್ಯಕ್ತಿ ತಮಿಳುನಾಡನ್ನು ಪ್ರತಿನಿಧಿಸಲು ಸಾಧ್ಯವಿಲ್ಲʼ ಎಂದು ಆರೋಪಿಸಿದ್ದಾರೆ.

ಇದಕ್ಕೂ ಮೊದಲು ಉತ್ತಮ ನಾಯಕತ್ವದ ಗುಣಕ್ಕಾಗಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಮರಾಜ್‌ ಅವರನ್ನು ರಾಹುಲ್‌ ನೆನಪಿಸಿಕೊಂಡರು. ರಾಜ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಘೋಷಿಸುವಾಗ ಇದೊಂದು ʼಕೆಟ್ಟʼ ನಿರ್ಧಾರ ಎಂದಿದ್ದ ಅರ್ಥಶಾಸ್ತ್ರಜ್ಞರ ಅಭಿಪ್ರಾಯವನ್ನು ಪರಿಗಣಿಸಿರಲಿಲ್ಲ. ಅವರು ಕೇವಲ ಜನರ ದನಿಗೆ ಕಿವಿಗೊಟ್ಟು ಯೋಜನೆ ರೂಪಿಸಿದ್ದರು ಎಂದು ಶ್ಲಾಘಿಸಿದರು.

234 ಸದಸ್ಯ ಬಲದತಮಿಳುನಾಡು ವಿಧಾನಸಭೆಗೆ ಏಪ್ರಿಲ್‌ 6ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.ಮತ ಎಣಿಕೆ ಕಾರ್ಯ ಮೇ 2ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ಘೋಷಿಸಿದೆ. ಕಾಂಗ್ರೆಸ್‌-ಡಿಎಂಕೆ ಮತ್ತು ಬಿಜೆಪಿ-ಎಐಡಿಎಂಕೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯಲು ಸಜ್ಜಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT