ಹಳಿ ತಪ್ಪಿದ ಕಣ್ಣೂರು–ಬೆಂಗಳೂರು ಎಕ್ಸ್ಪ್ರೆಸ್ ರೈಲು: ಪ್ರಯಾಣಿಕರು ಸುರಕ್ಷಿತ

ಬೆಂಗಳೂರು: ಕಣ್ಣೂರು–ಬೆಂಗಳೂರು ಎಕ್ಸ್ಪ್ರೆಸ್ ರೈಲಿನ ಐದು ಬೋಗಿಗಳು ಶುಕ್ರವಾರ ಮುಂಜಾನೆ ಹಳಿ ತಪ್ಪಿವೆ.
ಬೆಂಗಳೂರು ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ತೊಪ್ಪೂರು–ಸಿವಾಡಿ ಮಧ್ಯೆ ಬಂಡೆಗಳು ಉರುಳಿಬಿದ್ದ ಪರಿಣಾಮ ರೈಲು ಹಳಿ ತಪ್ಪಿದೆ. ಮುಂಜಾನೆ 3.50ರ ಸುಮಾರಿಗೆ ರೈಲು ಸಂಚರಿಸುತ್ತಿದ್ದಾಗಲೇ ರೈಲಿನ ಮೇಲೆ ಬಂಡೆಗಳು ಉರುಳಿದ್ದು, ರೈಲು ಹಳಿ ತಪ್ಪಿದೆ. ಎಲ್ಲ 2,348 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ನೈಋತ್ಯ ರೈಲ್ವೆ ಹೇಳಿಕೆ ಉಲ್ಲೇಖಿಸಿ ‘ಎಎನ್ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.
ರೈಲು ಸಂಖ್ಯೆ 07390 ಕಣ್ಣೂರು–ಬೆಂಗಳೂರು ಎಕ್ಸ್ಪ್ರೆಸ್ ಗುರುವಾರ ಸಂಜೆ ಕಣ್ಣೂರಿನಿಂದ ಪ್ರಯಾಣ ಬೆಳೆಸಿತ್ತು.
ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಅವರು ವೈದ್ಯರು, ವೈದ್ಯಕೀಯ ಪರಿಕರಗಳ ವಾಹನ ಸೇರಿದಂತೆ ಅಧಿಕಾರಿಗಳ ತಂಡದ ಜತೆ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಸುಸ್ಥಿತಿಯಲ್ಲಿರುವ ಬೋಗಿಗಳನ್ನು ಪ್ರಯಾಣಿಕರ ಸಹಿತ ತೊಪ್ಪೂರು ಮತ್ತು ಸೇಲಂ ಕಡೆಗೆ ಕಳುಹಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಘಟನಾ ಸ್ಥಳಕ್ಕೆ ತೊಪ್ಪೂರಿನಿಂದ ಐದು ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರಿಗೆ ನೀರು ಮತ್ತು ಲಘು ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲ್ವೆ ಇಲಾಖೆಯು ಸಹಾಯವಾಣಿ ಸಂಖ್ಯೆಗಳನ್ನೂ ಆರಂಭಿಸಿದ್ದು, ಹೊಸೂರಿಗೆ 04344-222603, ಬೆಂಗಳೂರಿಗೆ 080-22156554, ಧರ್ಮಪುರಿಗೆ 04342-232111 ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ.
ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು, ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
Around 3.50 am today, 5 coaches of Kannur-Bengaluru Express derailed b/w Toppuru-Sivadi of Bengaluru Division, due sudden falling of boulders on the train. All 2348 passengers on board are safe, no casualty/injury reported: South Western Railway (SWR)
(Photo source: SWR) pic.twitter.com/Yq9hhxIkQo
— ANI (@ANI) November 12, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.