ಹೈದರಾಬಾದ್ (ಪಿಟಿಐ): ‘2012ರಲ್ಲಿ ನಡೆದ ಇಂಡಿಯಾ ಎಗೆನೆಸ್ಟ್ ಕರಪ್ಷನ್ ಹೋರಾಟವು ಆರ್ಎಸ್ಎಸ್ ಬೆಂಬಲಿತ ಹೋರಾಟವಾಗಿತ್ತು. ಇದೇ ಹೋರಾಟದಿಂದಲೇ ಆಮ್ ಆದ್ಮಿ ಪಕ್ಷದ ಉದಯವಾಯಿತು. ಆದ್ದರಿಂದ ಆಮ್ ಆದ್ಮಿ ಪಕ್ಷವು ಬಿಜೆಪಿಯ ‘ಬಿ–ಟೀಂ’ ಆಗಿದೆ’ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಆರೋಪಿಸಿದರು.
‘ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ನೇರ ಹಣಾಹಣಿ ಇದೆ’ ಎಂದು ಅಭಿಪ್ರಾಯಪಟ್ಟರು.
‘ಚುನಾವಣಾ ಪ್ರಚಾರದ ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷವು ಎತ್ತುತ್ತಿರುವ ವಿಷಯಗಳು, ಆ ವಿಷಯಗಳನ್ನು ಅವರು ಹೇಳುತ್ತಿರುವ ರೀತಿ ಎಲ್ಲವೂ ಬಿಜೆಪಿಯ ಪ್ರಚಾರ ಕ್ರಮದಂತೆಯೇ ಇದೆ. ಬಿಜೆಪಿಗೂ ಆಮ್ ಆದ್ಮಿ ಪಕ್ಷಕ್ಕೂ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಎರಡೂ ಪಕ್ಷದವರು ನೆರಳಿನೊಂದಿಗೆ ಗುದ್ದಾಡುತ್ತಿದ್ದಾರೆ ಅಷ್ಟೆ’ ಎಂದರು.
ಎಐಎಂಐಎಂನ ಅಸಾದುದ್ದೀನ್ ಒವೈಸಿಯ ಭದ್ರಕೋಟೆ ಹೈದರಾಬಾದ್ ಅನ್ನು ಯಾತ್ರೆ ಪ್ರವೇಶಿಸಿದ ಸಂದರ್ಭದಲ್ಲಿ ಮಾತನಾಡಿದ ಜೈರಾಂ ರಮೇಶ್, ‘ಬಿಜೆಪಿ ಜೊತೆಗೆ ಒಳಒಪ್ಪಂದ ಮಾಡಿಕೊಂಡಿರುವ ಎಐಎಂಐಎಂ, ಕಾಂಗ್ರೆಸ್ ಮತಗಳನ್ನು ಒಡೆಯಲು ಚುನಾವಣೆಯಲ್ಲಿ ಸ್ಪರ್ಧಿಸುವ ಕೆಲಸ ಮಾಡುತ್ತದೆ’ ಎಂದು ಆರೋಪಿಸಿದರು.
‘ಬಿಜೆಪಿಯಿಂದ ‘ಆಮ್ಲಜನಕ’ವನ್ನು ತೆಗೆದುಕೊಳ್ಳುವ ಎಐಎಂಐಎಂ, ‘ಬೂಸ್ಟರ್ ಡೋಸ್’ ಅನ್ನು ವಾಪಸು ಕೊಡುತ್ತದೆ. ಈ ಮೊದಲು ಅದು ಯುಪಿಎಯ ಭಾಗವಾಗಿತ್ತು. ಕಾಂಗ್ರೆಸ್ನ ‘ಆಮ್ಲಜನಕ ಸಿಲಿಂಡರ್’ ಅನ್ನು ಬಳಸಿಕೊಳ್ಳುತ್ತಿತ್ತು. ಆದರೆ ಈಗ ಅದು ಬಿಜೆಪಿಯ ‘ಆಮ್ಲಜನಕ ಸಿಲಿಂಡರ್’ ಅನ್ನು ಬಳಸಿಕೊಳ್ಳುತ್ತಿದೆ’ ಎಂದರು.