ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಕೆಲವು ಸಂಘಟನಾತ್ಮಕ ಹುದ್ದೆಗಳಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ. ಪಕ್ಷದಲ್ಲಿ ನಾಯಕತ್ವ ಬದಲಾವಣೆಗಾಗಿ ದನಿ ಎತ್ತಿದ್ದ ಗುಂಪಿನ (ಜಿ–23) ಮುಖಂಡ ಅಖಿಲೇಶ್ ಪ್ರಸಾದ್ ಸಿಂಗ್ ಅವರನ್ನು ಬಿಹಾರ ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ.
ರಾಜಸ್ಥಾನದ ಉಸ್ತುವಾರಿ ಹೊಣೆಗೆ ರಾಜೀನಾಮೆ ನೀಡಿದ್ದ ಅಜಯ್ ಮಾಕನ್ ಅವರ ಜಾಗಕ್ಕೆ ಪಂಜಾಬ್ನ ಸುಖ್ವಿಂದರ್ ಸಿಂಗ್ ರಾಂಧವ ಅವರು ಬಂದಿದ್ದಾರೆ. ಚಾಲನಾ ಸಮಿತಿಗೂ ರಾಂಧವ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಸೋನಿಯಾ ಗಾಂಧಿ ಅವರ ಆಪ್ತರಾಗಿ ಗುರುತಿಸಿಕೊಂಡಿರುವ ಕುಮಾರಿ ಶೆಲ್ಜಾ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜೊತೆಗೆ ಛತ್ತೀಸಗಢದ ಉಸ್ತುವಾರಿ ನೀಡಲಾಗಿದೆ.
ದೆಹಲಿ ಘಟಕದ ಉಸ್ತುವಾರಿ ಹೊತ್ತಿರುವ ಶಕ್ತಿಸಿಂಹ ಗೋಹಿಲ್ ಅವರಿಗೆ ಹರಿಯಾಣದ ಉಸ್ತುವಾರಿ ವಹಿಸಲಾಗಿದೆ. ಅಜಯ್ ಮಾಕನ್, ಪಿ.ಎಲ್. ಪೂನಿಯಾ ಹಾಗೂ ವಿವೇಕ್ ಬನ್ಸಲ್ ಅವರಿಗೆ ವಹಿಸಿದ್ದ ಹುದ್ದೆ ಹಾಗೂ ಜವಾಬ್ದಾರಿಗಳಿಂದ ಬಿಡುಗಡೆ ಮಾಡಲಾಗಿದ್ದು, ಅವರು ಪಕ್ಷಕ್ಕೆ ನೀಡಿದ ಕೊಡುಗೆಯನ್ನು ಕಾಂಗ್ರೆಸ್ ಶ್ಲಾಘಿಸಿದೆ.