ನವದೆಹಲಿ: ದೇಶದಲ್ಲಿ ಕೋವಿಡ್–19 ಸೋಂಕಿಗೆ ತುತ್ತಾಗಿ ಗುಣಮುಖರಾದವರ ಪ್ರಮಾಣ ಶೇ 70.77 ರಷ್ಟಿದ್ದು ಸಾವಿನ ಪ್ರಮಾಣ ಶೇ 1.96ಕ್ಕೆಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಗುರುವಾರ ಒಂದೇ ದಿನ ದೇಶದಾದ್ಯಂತ 66,999 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 942 ಜನರು ಮೃತಪಟ್ಟಿದ್ದಾರೆ. ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಜಾಗತಿಕವಾಗಿ ಭಾರತವು ಅಮೆರಿಕ ಹಾಗೂ ಬ್ರೆಜಿಲ್ ನಂತರದ ಸ್ಥಾನದಲ್ಲಿದೆ.
ಅಸ್ಸಾಂ ಸರ್ಕಾರ ಗುರುವಾರ ಲಾಕ್ಡೌನ್ ಸಡಿಲಿಕೆ ಮಾಡಿದ್ದು ಬಸ್ ಸಂಚಾರ ಆರಂಭಿಸಿದೆ. ಇತ್ತ ಪಂಜಾಬ್ ಸರ್ಕಾರ ಕಂಟನ್ಮೆಂಟ್ ಜೋನ್ಗಳಲ್ಲಿ ಶೇ 100 ರಷ್ಟು ಪರೀಕ್ಷೆ ನಡೆಸಲು ಉದ್ದೇಶಿಸಿದೆ.
ಗುರುವಾರ ಸಂಜೆಯವರೆಗೂ ಮಹಾರಾಷ್ಟ್ರದಲ್ಲಿ 10 ಸಾವಿರ, ಆಂಧ್ರದಲ್ಲಿ 9 ಸಾವಿರ ಹಾಗೂ ದೆಹಲಿಯಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರದಲ್ಲಿ ಒಟ್ಟು 5,35,601 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 1,48,860 ಪ್ರಕರಣಗಳು ಕ್ರಿಯಾಶೀಲವಾಗಿದ್ದು, 3,68,435 ಮಂದಿ ಕೋವಿಡ್ನಿಂದ ಗುಣಮುಖರಾಗಿದ್ದಾರೆ.
ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 23,96,638ಕ್ಕೆ ಏರಿಕೆಯಾಗಿದೆ. ಈವರೆಗೆ 47,033 ಸಾವು ಸಂಭವಿಸಿದೆ. 16,39,599 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 6,43,948 ಸಕ್ರಿಯ ಪ್ರಕರಣಗಳಿವೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ರಾಜ್ಯದಲ್ಲಿ ಆಗಸ್ಟ್ 12ರ ಸಂಜೆ 5 ಗಂಟೆಯಿಂದ ಆಗಸ್ಟ್ 13ರ ಸಂಜೆ 5ರ ವರೆಗೆ ಹೊಸದಾಗಿ ಒಟ್ಟು 6,706 ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, 103 ಮಂದಿ ಮೃತಪಟ್ಟಿದ್ದಾರೆ.