ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೌಕ್ತೆ’ ಚಂಡಮಾರುತ: 53 ತಂಡಗಳನ್ನು ಸಜ್ಜುಗೊಳಿಸಿರುವ ಎನ್‌ಡಿಆರ್‌ಎಫ್‌

Last Updated 14 ಮೇ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗುತ್ತಿರುವ ‘ತೌಕ್ತೆ’ ಚಂಡಮಾರುತದ ಪರಿಣಾಮಗಳನ್ನು ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) 53 ತಂಡಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಈ ತಂಡಗಳನ್ನು ಕೇರಳ, ಕರ್ನಾಟಕ, ತಮಿಳುನಾಡು, ಗುಜರಾತ್ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ನಿಯೋಜಿಸಲಾಗುತ್ತಿದೆ ಎಂದು ಎನ್‌ಡಿಆರ್‌ಎಫ್ ಪ್ರಧಾನ ನಿರ್ದೇಶಕ ಎಸ್.ಎನ್. ಪ್ರಧಾನ್ ಟ್ವೀಟ್‌ ಮಾಡಿದ್ದಾರೆ.

ಈ 53 ತಂಡಗಳ ಪೈಕಿ 24 ತಂಡಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಉಳಿದ ತಂಡಗಳು ಸಜ್ಜಾಗಿದ್ದು, ಅಗತ್ಯ ಬಂದಾಗ ಬಳಸಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಪ್ರತಿ ಎನ್‌ಡಿಆರ್‌ಎಫ್‌ ತಂಡವು 40 ಸಿಬ್ಬಂದಿಯನ್ನು ಹೊಂದಿರುತ್ತದೆ. ಅವರ ಬಳಿ ಮರ, ಕಂಬ ಕತ್ತರಿಸುವ ಸಾಧನಗಳು ಇರುತ್ತವೆ. ದೋಣಿ, ಮೂಲ ವೈದ್ಯಕೀಯ ಸಾಮಗ್ರಿ ಸೇರಿದಂತೆ ಇತರ ಪರಿಹಾರ ಸಾಧನಗಳು ಈ ತಂಡಗಳಲ್ಲಿ ಇರುತ್ತವೆ.

ಅರಬ್ಬಿ ಸಮುದ್ರದಲ್ಲಿ ಲಕ್ಷದೀಪದ ಸಮೀಪ ಒತ್ತಡ ಸೃಷ್ಟಿಯಾಗಿದ್ದು, ದೇಶದ ಕರಾವಳಿ ತೀರದ ರಾಜ್ಯಗಳು ಎಚ್ಚರದಿಂದ ಇರಬೇಕು ಎಂದು ಭಾರತೀಯ ಹವಾಮಾನ ಇಲಾಖೆಯ ಸೂಚಿಸಿದೆ.

ಶನಿವಾರ ಬೆಳಿಗ್ಗೆಯಷ್ಟರಲ್ಲಿ ಅಲ್ಲಿ ವಾಯುಭಾರ ಕುಸಿತವಾಗಿ ನಂತರದ 24 ಗಂಟೆಗಳಲ್ಲಿ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ.

ಇದು ಕ್ರಮೇಣ ತೀವ್ರಗೊಂಡು ಉತ್ತರ–ವಾಯವ್ಯ ಗುಜರಾತ್‌ ಮತ್ತು ನೆರೆಯ ಪಾಕಿಸ್ತಾನ ತೀರದತ್ತ ಸಾಗಲಿದೆ. ಇದೇ 18ರ ಸಂಜೆ ವೇಳೆಗೆ ಚಂಡಮಾರುತವು ಗುಜರಾತ್‌ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ.

ಈ ಚಂಡಮಾರುತಕ್ಕೆ ‘ತೌಕ್ತೆ’ ಎಂದು ಹೆಸರಿಸಲಾಗಿದೆ. ಇದು ಮ್ಯಾನ್ಮಾರ್‌ ಭಾಷೆಯ ಪದವಾಗಿದ್ದು, ‘ಹಲ್ಲಿ’ ಎಂದರ್ಥ. ಇದು ಭಾರತೀಯ ಕರಾವಳಿಯುದ್ದಕ್ಕೂ ಪ್ರವೇಶಿಸುತ್ತಿರುವ ಈ ವರ್ಷದ ಮೊದಲ ಚಂಡಮಾರುತವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT