ನವದೆಹಲಿ: ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಬಡವರಿಗೆ ಮತ್ತು ಮಕ್ಕಳಿಗಾಗಿ ವೈದ್ಯಕೀಯ ಸೌಲಭ್ಯಗಳನ್ನೊಳಗೊಂಡ ಕೋವಿಡ್-19 ಆರೈಕೆ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಕೋರಿ ಟ್ರಸ್ಟ್ವೊಂದು ಸಲ್ಲಿಸಿರುವ ಅರ್ಜಿ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ದೆಹಲಿ ಮತ್ತು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ಪೀಠವು,‘ಮಹಾತ್ಮ ಹಜಾರಿಲಾಲ್ ಮೆಮೊರಿಯಲ್ ಟ್ರಸ್ಟ್ ಸಲ್ಲಿಸಿದ ಪಿಐಎಲ್ ಬಗ್ಗೆ ಕಾನೂನು, ನಿಯಮ ಮತ್ತು ಸರ್ಕಾರದ ನೀತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಿ’ ಎಂದು ಹೇಳಿದೆ.
‘ಮನೆಯಲ್ಲಿ ಪ್ರತ್ಯೇಕವಾಸಕ್ಕೆ ಸಂಬಂಧಿಸಿದ ಸರ್ಕಾರದ ನೀತಿಯು ವಿಫಲವಾಗಿದೆ. ಈ ನೀತಿಯಡಿ ಸೋಂಕಿತ ವ್ಯಕ್ತಿಯು ಶೌಚಾಲಯವನ್ನು ಹೊಂದಿರುವ ಪ್ರತ್ಯೇಕ ಕೊಠಡಿಯಲ್ಲಿ ವಾಸವಾಗಬೇಕು. ಆದರೆ ಹೆಚ್ಚಿನ ಜನರ ಮನೆಯಲ್ಲಿ ಈ ರೀತಿಯ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ ಈ ನೀತಿಯಲ್ಲಿ ತಿದ್ದುಪಡಿಯನ್ನು ತರಬೇಕು. ಜತಗೆ ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಬಡವರು ಮತ್ತು ಮಕ್ಕಳಿಗಾಗಿ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.