ನವದೆಹಲಿ: ‘ಫೆಬ್ರುವರಿ 2025ರೊಳಗೆ ಯಮುನಾ ನದಿಯ ನೀರನ್ನು ಸ್ನಾನಕ್ಕೆ ಬಳಸುವಷ್ಟು ಶುದ್ಧವಾಗಿಸಲು ನಮ್ಮ ಸರ್ಕಾರ ಆರು ಅಂಶಗಳ ಯೋಜನೆ ಸಿದ್ಧಪಡಿಸಿದೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.
‘ಹಾಲಿ ಚಾಲ್ತಿಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಸಾಮರ್ಥ್ಯವನ್ನು ಹೆಚ್ಚಿಸಿ, ಮೇಲ್ದರ್ಜೆಗೇರಿಸುವುದರ ಜೊತೆಗೆ ಹೊಸದಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ’ ಎಂದು ಅವರು ತಿಳಿಸಿದರು.
‘ಈ ಮೂಲಕ, ನಿತ್ಯ ತ್ಯಾಜ್ಯ ನೀರಿನ ಸಂಸ್ಕರಣೆಯ ಪ್ರಮಾಣವನ್ನು 600 ದಶಲಕ್ಷ ಗ್ಯಾಲನ್ನಿಂದ 750 ರಿಂದ 800 ದಶಲಕ್ಷ ಗ್ಯಾಲನ್ಗೆ (ಎಂಜಿಡಿ) ಏರಿಸುವ ಯೋಜನೆಯಿದೆ’ ಎಂದು ಕೇಜ್ರಿವಾಲ್ ತಿಳಿಸಿದರು.
‘ನಜಾಫ್ಗಡ, ಬಾದ್ಷಾಪುರ, ಸಪ್ಲಿಮೆಂಟರಿ ಮತ್ತು ಗಾಜಿಪುರ ಭಾಗದಿಂದ ಪ್ರಮುಖವಾಗಿ ಸೇರುತ್ತಿರುವ ತ್ಯಾಜ್ಯ ನೀರನ್ನು ಆ ಸ್ಥಳಗಳಲ್ಲಿಯೇ ಸಂಸ್ಕರಿಸಲಾಗುತ್ತದೆ’ ಎಂದು ಅವರು ಹೇಳಿದರು.
ಅಲ್ಲದೆ ಯಮುನಾ ನದಿಗೆಕೈಗಾರಿಕಾ ತ್ಯಾಜ್ಯ ಹರಿಸುವ ಕೈಗಾರಿಕೆಗಳನ್ನು ಸರ್ಕಾರ ಮುಚ್ಚಿಸಲಿದೆ ಎಂದು ಕೇಜ್ರಿವಾಲ್ ತಿಳಿಸಿದರು.
’ಜುಗ್ಗಿ ಜೋಪ್ರಿ’ಯಲ್ಲಿ ಸಂಗ್ರಹವಾಗುವ ತ್ಯಾಜ್ಯ ನೀರು, ಮಳೆ ನೀರು ಹರಿಯುವ ಚರಂಡಿಗಳ ಮೂಲಕ ಯಮುನಾ ನದಿ ಸೇರುತ್ತದೆ. ಈ ತಾಜ್ಯ ನೀರನ್ನು ಒಳಚರಂಡಿ ಜಾಲಕ್ಕೆ ಜೋಡಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.