ವ್ಯಾಪಾರಿಗಳಿಗೆ ನೆರವಾಗಲು ‘ದೆಹಲಿ ಬಜಾರ್‘ ವೆಬ್ಪೋರ್ಟಲ್: ಕೇಜ್ರಿವಾಲ್

ನವದೆಹಲಿ: ನಗರದ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ‘ದೆಹಲಿ ಬಜಾರ್‘ ವೆಬ್ ಪೋರ್ಟಲ್ ಸಿದ್ಧಪಡಿಸುತ್ತಿರುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಘೋಷಿಸಿದರು.
ಮುಂದಿನ ವರ್ಷ ಆಗಸ್ಟ್ ವೇಳೆಗೆ ಈ ಪೋರ್ಟಲ್ ಸಿದ್ಧವಾಗುವ ನಿರೀಕ್ಷೆ ಇದೆ. ಇದರ ಮೂಲಕ ವ್ಯಾಪಾರಿಗಳು ಮತ್ತು ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ದೇಶೀಯವಾಗಿ ಮತ್ತು ವಿದೇಶಕ್ಕೂ ಮಾರಾಟ ಮಾಡಬಹುದಾಗಿದೆ ಎಂದು ಕೇಜ್ರಿವಲ್ ತಿಳಿಸಿದರು.
‘ಈ ಪೋರ್ಟಲ್ ಬಹು ದೊಡ್ಡ ಪ್ರಮಾಣದಲ್ಲಿ ದೆಹಲಿಯ ಆದಾಯ, ಒಟ್ಟು ಆಂತರಿಕ ಉತ್ಪನ್ನ ಮತ್ತು ಆರ್ಥಿಕತೆ ವೃದ್ಧಿಗೆ ಉತ್ತೇಜನ ನೀಡುವ ನಿರೀಕ್ಷೆ ಇದೆ‘ ಎಂದು ಅವರು ಹೇಳಿದರು.
‘ಉದ್ಯಮಿಗಳು, ವ್ಯಾಪಾರಿಗಳು, ಉತ್ಪನ್ನ ತಯಾರಕರು, ಮಾರುಕಟ್ಟೆಗಳು ಮತ್ತು ಅಂಗಡಿಯವರು ಈ ಪೋರ್ಟಲ್ನಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಬಹುದು ಮತ್ತು ದೇಶ ಹಾಗೂ ವಿದೇಶಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು‘ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದರಲ್ಲಿ ವರ್ಚುವಲ್ ಮಾರುಕಟ್ಟೆ(ಆನ್ಲೈನ್ ಮಾರ್ಕೆಟ್)ಗಳು ಇವೆ. ಈ ಆನ್ಲೈನ್ ಮಾರುಕಟ್ಟೆಗಳ ಮೂಲಕ ಜನರು ತಮಗೆ ಬೇಕಾದ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಂಡು ಖರೀದಿಸಬಹುದು. ಅಷ್ಟೇ ಅಲ್ಲ, ವರ್ಚುವಲ್ ಆಗಿ ಉತ್ಪನ್ನಗಳ ಪ್ರದರ್ಶನವನ್ನು ಆಯೋಜಿಸಬಹುದು‘ ಎಂದು ಹೇಳಿದರು.
ಇದೇ ವೇಳೆ, ಹಬ್ಬದ ಸಮಯದಲ್ಲಿ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಜನ ಸೇರುತ್ತಿದ್ದಾರೆ ಅದರಲ್ಲಿ ಬಹುತೇಕರು ಕೋವಿಡ್ ಮಾರ್ಗಸೂಚಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ದಯವಿಟ್ಟು ಎಲ್ಲರೂ ಮಾಸ್ಕ್ ಧರಿಸಿ, ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳಿ ಎಂದು ಕೇಜ್ರಿವಾಲ್ ಮನವಿ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.