ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮರಗಳನ್ನು ಕಡಿಯುವುದಕ್ಕೆ ಗುರುವಾರ ತಡೆ ನೀಡಿರುವ ದೆಹಲಿ ಹೈಕೋರ್ಟ್, ನಗರದ ಹಸಿರು ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ಈ ರೀತಿಯ ಕ್ರಮ ಕೈಗೊಳ್ಳದೇ ಬೇರೆ ಮಾರ್ಗವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
‘ಕಳೆದ 3 ವರ್ಷಗಳ ಅವಧಿಯಲ್ಲಿ ನಗರದಾದ್ಯಂತ 29,000ಕ್ಕೂ ಅಧಿಕ ಮರಗಳನ್ನು ನೆಲಕ್ಕುರುಳಿಸಲಾಗಿದ್ದು, ಇಷ್ಟೊಂದು ಸಂಖ್ಯೆಯ ಮರಗಳನ್ನು ಕಡಿಯುವ ಅಗತ್ಯ ಇತ್ತೇ?’ ಎಂದು ಮರಗಳ ಸಂರಕ್ಷಣೆಗೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಜ್ಮಿ ವಜೀರಿ ಪ್ರಶ್ನಿಸಿದ್ದಾರೆ.
‘ಮರಗಳನ್ನು ಕಡಿಯುವುದಕ್ಕೆ ನಾವು ತಡೆ ನೀಡಿದ್ದೇವೆ. ಈ ಪ್ರಕರಣದ ವಿಸ್ತೃತ ವಿಚಾರಣೆ ಜೂನ್ 2ರಂದು ನಡೆಯಲಿದೆ. ಅಲ್ಲಿಯವರೆಗೂ ಮರಗಳನ್ನು ಕಡಿಯಕೂಡದು’ ಎಂದು ನ್ಯಾಯಪೀಠ ಆದೇಶಿಸಿದೆ.
‘3 ವರ್ಷಗಳಲ್ಲಿ ಒಟ್ಟು 29,946 ಮರಗಳನ್ನು ಕಡಿಯಲು ಅನುಮತಿ ನೀಡಲಾಗಿದೆ. ದಿನವೊಂದಕ್ಕೆ ಸರಾಸರಿ 27 ಮರಗಳಿಗೆ ಕೊಡಲಿ ಏಟು ಬಿದ್ದಿದೆ’ ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿದೆ.
ಪೂರ್ಣ ಬೆಳೆದು ನಿಂತ ಮರಗಳನ್ನು ಕಡಿಯುವುದರಿಂದ ನಗರದ ಪರಿಸರ ಸಮತೋಲನ ಇನ್ನಷ್ಟು ಹದಗೆಡುತ್ತದೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ತುರ್ತಾಗಿ ವಾಯು ಮಾಲಿನ್ಯವನ್ನು ತಗ್ಗಿಸಬೇಕಾಗಿದೆ ಎಂದು ಪೀಠ ಹೇಳಿದೆ.
ಸಂಪೂರ್ಣ ಬೆಳೆದ ಮರಗಳನ್ನು ಕಡಿಯುವುದರ ಕುರಿತು ನ್ಯಾಯಾಲಯ ಕಳೆದ ತಿಂಗಳು ಕಳವಳ ವ್ಯಕ್ತಪಡಿಸಿತ್ತು.