ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಶೀಘ್ರದಲ್ಲೇ ಕೆರೆಗಳ ನಗರವಾಗಲಿದ್ದು, ಪ್ರವಾಸಿ ತಾಣವಾಗಿ ಮಾರ್ಪಡಲಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.
ಕೆರೆಗಳ ಪುನರುಜ್ಜೀವನ ಕುರಿತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರ ಟ್ವೀಟ್ ಅನ್ನು ಟ್ಯಾಗ್ ಮಾಡಿರುವ ಕೇಜ್ರಿವಾಲ್, ‘ದೆಹಲಿ ಶೀಘ್ರದಲ್ಲೇ ಕೆರೆಗಳ ನಗರವಾಗಲಿದೆ’ ಎಂದು ತಿಳಿಸಿದ್ದಾರೆ.
ದೆಹಲಿಯಾದ್ಯಂತ ನಾವು ಹಲವಾರು ಸುಂದರವಾದ ಕೆರೆಗಳನ್ನು ಹೊಂದಲಿದ್ದೇವೆ. ಅವು ಸ್ಥಳೀಯ ಜನರಿಗೆ ರಿಫ್ರೆಶ್ ತಾಣಗಳಾಗಿ ಕಾರ್ಯನಿರ್ವಹಿಸುತ್ತವೆ. ಹೊರಗಿನವರಿಗೆ ಪ್ರವಾಸಿ ತಾಣಗಳಾಗಿ ಮಾರ್ಪಡಲಿವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ವಾಯವ್ಯ ದೆಹಲಿಯ ಬವಾನಾದಲ್ಲಿರುವ ಸನ್ನೋತ್ ಕೆರೆಯ ಕಾಮಗಾರಿ ಪರಿಶೀಲನೆ ನಡೆಸಿದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ‘ರಾಜಧಾನಿಯಲ್ಲಿ 50 ಕೆರೆಗಳ ಪುನರುಜ್ಜೀವನ ಮತ್ತು ಸೌಂದರ್ಯೀಕರಣವನ್ನು ಸರ್ಕಾರ ಕೈಗೊಳ್ಳುತ್ತಿದೆ’ ಎಂದು ಟ್ವೀಟಿಸಿದ್ದಾರೆ.
ಸನ್ನೋತ್ ಕೆರೆಯು ಆರು ಎಕರೆಯಲ್ಲಿ ಹರಡಿಕೊಂಡಿದ್ದು, ಮಕ್ಕಳಿಗಾಗಿ ಆಟದ ಮೈದಾನ, ಪಿಕ್ನಿಕ್ ಉದ್ಯಾನ, ವಾಕ್ ವೇ, ಛತ್ ಪೂಜಾ ಘಾಟ್ ಮತ್ತು ಸಾರ್ವಜನಿಕರಿಗೆ ಜಿಮ್ ಮುಂತಾದ ಸೌಲಭ್ಯಗಳನ್ನು ಹೊಂದಿರಲಿದೆ ಎಂದು ಹೇಳಿದ್ದಾರೆ.