ರಾಂಚಿ (ಪಿಟಿಐ): ಧನ್ಬಾದ್ ಕೋರ್ಟ್ನ ನ್ಯಾಯಾಧೀಶರಾಗಿದ್ದ ಉತ್ತಮ್ ಆನಂದ್ ಅವರಿಗೆ ಆಟೊ ಚಾಲಕ ಉದ್ದೇಶಪೂರ್ವಕವಾಗಿಯೇ ಡಿಕ್ಕಿ ಹೊಡೆದಿದ್ದ ಎಂದು ಸಿಬಿಐ ಗುರುವಾರ ಜಾರ್ಖಂಡ್ ಹೈಕೋರ್ಟ್ಗೆ ಹೇಳಿಕೆ ನೀಡಿತು.
ಶಂಕಾಸ್ಪದ ಸಾವಿನ ಪ್ರಕರಣ ಸಂಬಂಧ ಆಟೊಚಾಲಕನನ್ನು ಬಂಧಿಸಲಾಗಿದೆ. ಪ್ರಕರಣದ ವಿಚಾರಣೆ ವೇಳೆ ಸಿಬಿಐ ಅಧಿಕಾರಿಗಳು, ನ್ಯಾಯಾಧೀಶರ ಸಾವಿನ ಪ್ರಕರಣದಲ್ಲಿ ಭಾಗಿಯಾದವರ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಹೇಳಿದರು.
ನ್ಯಾಯಾಧೀಶ, 49 ವರ್ಷದ ಉತ್ತಮ್ ಆನಂದ್ ಅವರು ಜುಲೈ 28ರ ಮುಂಜಾನೆ ಜಾಗಿಂಗ್ಗೆ ಹೋಗಿದ್ದಾಗ ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಆಟೊರಿಕ್ಷಾ ಡಿಕ್ಕಿ ಹೊಡೆದಿದ್ದುದು ಬಳಿಕ ಗೊತ್ತಾಗಿತ್ತು.
ಸಿಬಿಐ ವಲಯ ಜಂಟಿ ನಿರ್ದೇಶಕ ಶರದ್ ಅಗರವಾಲ್ ಅವರು, ‘ನ್ಯಾಯಾಧೀಶರ ಸಾವು ಅಪಘಾತವಲ್ಲ. ಅವರ ಸಾವಿನ ಹಿಂದಿನ ಸತ್ಯ ತಿಳಿಯಲು ಸಿಬಿಐ ತನಿಖೆಯನ್ನು ಚುರುಕುಗೊಳಿಸಿದೆ’ ಎಂದು ಹೇಳಿದರು.
‘ಈ ಕೃತ್ಯ ನ್ಯಾಯಾಂಗದ ನೈತಿಕತೆಯನ್ನು ಕುಂದಿಸಿದೆ. ತನಿಖೆ ವಿಳಂಬವಾದಷ್ಟೂ ಸತ್ಯ ತಿಳಿಯುವುದು ಕಷ್ಟವಾಗಬಹುದು’ ಎಂದು ಮುಖ್ಯ ನ್ಯಾಯಮೂರ್ತಿ ರವಿ ರಂಜನ್, ನ್ಯಾಯಮೂರ್ತಿ ಸುಜಿತ್ ನಾರಾಯಣ್ ಪ್ರಸಾದ್ ಅವರಿದ್ದ ಪೀಠ ಹೇಳಿತು.