ಚೆನ್ನೈ: ತಮಿಳುನಾಡಿನ ಡಿಎಂಕೆ ಸರ್ಕಾರವು ಶುಕ್ರವಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ₹3 ತೆರಿಗೆ ಕಡಿತ ಮಾಡುವುದಾಗಿ ಘೋಷಿಸಿದೆ.
ಇಂಧನ ಬೆಲೆಯ ಹೆಚ್ಚಳಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದಿರುವ ಡಿಎಂಕೆ ಸರ್ಕಾರ, ಗ್ರಾಹಕರಿಗೆ ಪರಿಹಾರ ನೀಡುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ ಎಂದು ಹೇಳಿದೆ.
ಪ್ರಸಕ್ತ ಸಾಲಿನ ಪರಿಷ್ಕೃತ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಿದ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಲಹೆ ಮೇರೆಗೆ ತೆರಿಗೆ ಕಡಿತ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಿಸಿದರು.
‘ಸರ್ಕಾರವು ಪೆಟ್ರೋಲ್ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್ಗೆ ₹3 ಕಡಿಮೆ ಮಾಡಲು ನಿರ್ಧರಿಸಿದೆ. ಆ ಮೂಲಕ ರಾಜ್ಯದ ಶ್ರಮಜೀವಿ ವರ್ಗದ ಜನರಿಗೆ ಪ್ರಮುಖ ಪರಿಹಾರ ನೀಡಿದೆ ಎಂದು ಸದನಕ್ಕೆ ತಿಳಿಸಲು ನನಗೆ ಸಂತೋಷವಾಗಿದೆ’ ಎಂದಿದ್ದಾರೆ ಪಳನಿವೇಲ್ ತ್ಯಾಗರಾಜನ್.
ಕೆಲವು ದಿನಗಳ ಹಿಂದೆ ರಾಜ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ಹೊರಡಿಸಿದ ಶ್ವೇತಪತ್ರದ ಬಗ್ಗೆ ಉಲ್ಲೇಖಿಸಿದ ಸಚಿವರು, ತೆರಿಗೆ ಕಡಿಮೆ ಮಾಡಿರುವುದರಿಂದ ರಾಜ್ಯ ಸರ್ಕಾರಕ್ಕೆ ₹1,160 ಕೋಟಿ ಆದಾಯ ನಷ್ಟವಾಗುತ್ತದೆ ಎಂದರು.