ಚೆನ್ನೈ: ರೈಲು ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸಿದ ಬಗ್ಗೆ ಎಸ್ಎಂಎಸ್ ಸಂದೇಶ ಹಿಂದಿ ಭಾಷೆಯಲ್ಲಿ ಬರುತ್ತಿದೆ ಎಂದು ಡಿಎಂಕೆ ಮತ್ತು ಪಿಎಂಕೆ ಪಕ್ಷಗಳು ಆಕ್ಷೇಪಿಸಿವೆ. ಇದೂ ಹಿಂದಿ ಹೇರಿಕೆಯೇ ಆಗಿದೆ ಎಂದು ಡಿಎಂಕೆ ಸಂಸದೆ ತಮಿಜಾಚಿ ತಂಗಪಾಂಡಿಯನ್ ಟೀಕಿಸಿದ್ದಾರೆ.
ಹಿಂದಿ ಭಾಷೆಯ ಎಸ್ಎಂಎಸ್ ಸಂದೇಶದ ಚಿತ್ರವನ್ನು ಟ್ವೀಟ್ ಮಾಡಿರುವ ಅವರು, ‘ಹಿಂದಿ ಭಾಷೆ ಹೇರುವುದಿಲ್ಲ ಎಂಬ ಕೇಂದ್ರದ ಭರವಸೆ ನಂತರವೂ ಭಿನ್ನ ಮಾರ್ಗಗಳ ಮೂಲಕ ಇಂಥ ಯತ್ನ ನಡೆದಿದೆ. ಹಿಂದಿಯೇತರ ಭಾಷಿಕರ ಮೇಲೆ ಹಿಂದಿ ಹೇರಿಕೆ ಬೇಡ’ ಎಂದಿದ್ದಾರೆ.
‘ಇದು, ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇ–ಟಿಕೆಟ್ ನೀಡುವ ಅಧಿಕೃತ ಸಂಸ್ಥೆಯಾಗಿರುವ ಐಆರ್ಸಿಟಿಸಿಗೆ ಬರಲಿದೆ’ ಎಂದು ದಕ್ಷಿಣ ರೈಲ್ವೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
‘ಜನರ ಭಾವನೆ ಗೌರವಿಸದೇ ಹಿಂದಿ ಹೇರಲಾಗುತ್ತಿದೆ’ ಎಂದು ಪಕ್ಷದ ಸಂಸದೆ ಕನಿಮೋಳಿ ಹೇಳಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಬೆಂಬಲಿಸುತ್ತಿರುವ ಪಿಎಂಕೆ ಸ್ಥಾಪಕ ಡಾ.ಎಸ್.ರಾಮದಾಸ್ ಅವರು, ‘ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.