ಚೆನ್ನೈ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ರದ್ದುಪಡಿಸುವಂತೆ ಪಕ್ಷವು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು. ಅಲ್ಲದೆ, ಸಿಎಎ ವಿರೋಧಿ ಹೋರಾಟವನ್ನು ಪಕ್ಷ ಮುಂದುವರಿಸಲಿದೆ ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ವಾಲಿನ್ ಭಾನುವಾರ ಹೇಳಿದರು.
ದೇಶದಲ್ಲಿರುವ ನಿರಾಶ್ರಿತ ಶ್ರೀಲಂಕಾ ತಮಿಳರಿಗೆ ಪೌರತ್ವ ನೀಡಬೇಕು ಎಂದೂ ಅವರು ಒತ್ತಾಯಿಸಿದರು.
ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೊರತಂದ ಪಕ್ಷದ ಪ್ರಣಾಳಿಕೆಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿದ ನಂತರ ಶನಿವಾರ ಮತ್ತೊಮ್ಮೆ ಅದನ್ನು ಬಿಡುಗಡೆ ಮಾಡಲಾಯಿತು. ಈ ಪರಿಷ್ಕೃತ ಪ್ರಣಾಳಿಕೆಯಲ್ಲಿ ಈ ಎರಡು ಅಂಶಗಳನ್ನು ಸೇರಿಸಲಾಗಿದೆ.
‘ಪಕ್ಷವು ಮೊದಲಿನಿಂದಲೂ ಸಿಎಎ ವಿರೋಧಿಸುತ್ತಾ ಬಂದಿದೆ. ಈ ವಿದಾದಾತ್ಮಕ ಕಾಯ್ದೆ ವಿರುದ್ಧ ತಮಿಳುನಾಡಿನಲ್ಲಿ ಒಂದು ಕೋಟಿ ಸಹಿ ಸಂಗ್ರಹಿಸುವ ಅಭಿಯಾನವನ್ನು ಸಹ ಹಮ್ಮಿಕೊಳ್ಳಲಾಗಿತ್ತು’ ಎಂದು ಹೇಳಿದರು.
‘ಪಕ್ಷವು ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ, ಸಿಎಎ ರದ್ದತಿಗೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.