ನವದೆಹಲಿ: ಅಲೋಪಥಿ ಕುರಿತು ಯೋಗಗುರು ಬಾಬಾ ರಾಮ್ದೇವ್ ನೀಡಿರುವ ಹೇಳಿಕೆ ಪ್ರತಿಭಟಿಸಿ ದೇಶದಾದ್ಯಂತ ಜೂನ್ 1ರಂದು ಕರಾಳ ದಿನ ಆಚರಿಸಲು ನಿರ್ಧರಿಸಿರುವುದಾಗಿ ವೈದ್ಯರ ಸಂಘಟನೆಗಳ ಒಕ್ಕೂಟ ಹೇಳಿದೆ.
ತಮ್ಮ ಹೇಳಿಕೆಗೆ ರಾಮ್ದೇವ್ ಅವರು ಬೇಷರತ್ತಾಗಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದೂ ಒಕ್ಕೂಟವು ಪ್ರಕಟಣೆಯಲ್ಲಿ ಆಗ್ರಹಿಸಿದೆ.
ಅಲೋಪಥಿಗೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ಚಿಕಿತ್ಸೆ ನೀಡುವ ಸಾಮರ್ಥ್ಯವಿದೆಯೇ ಎಂಬುದನ್ನು ಪ್ರಶ್ನಿಸಿದ್ದ ರಾಮದೇವ್, ಈ ಚಿಕಿತ್ಸಾ ವಿಧಾನದಿಂದ ಲಕ್ಷಾಂತರ ಮಂದಿ ಸಾಯುವಂತಾಗಿದೆ ಎಂದು ಆರೋಪಿಸಿದ್ದರು. ಇದಕ್ಕೆ ದೇಶದಾದ್ಯಂತ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು.
ಈ ಮಧ್ಯೆ, ಉತ್ತರಾಖಂಡದ ಭಾರತೀಯ ವೈದ್ಯಕೀಯ ಮಂಡಳಿಯು (ಐಎಂಎ) ಸಾರ್ವಜನಿಕ ವೇದಿಕೆಯಲ್ಲಿ ಮುಕ್ತ ಚರ್ಚೆಗೆ ಬರುವಂತೆ ರಾಮ್ದೇವ್ ಅವರಿಗೆ ಸವಾಲೆಸೆದಿದೆ.