ಲಖನೌ: ಮಥುರಾ ಜಿಲ್ಲೆಯ ಪವಿತ್ರ ಗೋವರ್ಧನ ಬೆಟ್ಟದ ಬಂಡೆಗಳ ತುಂಡುಗಳನ್ನು ಅಕ್ರಮವಾಗಿ ಆನ್ಲೈನ್ ಮೂಲಕ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಂಡಿಯನ್ ಇ–ಕಾಮರ್ಸ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಐವರ ವಿರುದ್ಧ ಮಥುರಾ ಜಿಲ್ಲೆಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇಲ್ಲಿನ ಪೊಲೀಸ್ ಮೂಲಗಳ ಪ್ರಕಾರ, ಪ್ರಕರಣದ ಸಂಬಂಧ ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಕಂಪನಿಯ ಸ್ಥಳೀಯವಾಗಿ ಬಂಡೆಗಳ ತುಂಡುಗಳನ್ನು ಸರಬರಾಜು ಮಾಡುತ್ತಿದ್ದವನನ್ನೂ ಬಂಧಿಸಲಾಗಿದೆ.
ಬಂಡೆಗಳ ತುಂಡುಗಳ ಅಕ್ರಮ ಮಾರಾಟದ ವಿರುದ್ಧ ಪ್ರತಿಭಟನೆ ನಡೆಸಿದ ಸ್ಥಳೀಯ ನಿವಾಸಿಗಳು, ಭಕ್ತರು, ಸಂತರು, ಇದಕ್ಕೆ ಕಾರಣರಾಗಿರುವ ಇ–ಕಾಮರ್ಸ್ ಕಂಪನಿಯ ಸಿಇಒ ಮತ್ತು ಇತರ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕಾಗಿ ಒತ್ತಾಯಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸದ್ದವು‘ ಎಂದು ಮೂಲಗಳು ತಿಳಿಸಿವೆ.
ಗೋವರ್ಧನ ಬೆಟ್ಟದ ಬಂಡೆಗಳನ್ನು ಮಾರಾಟ ಮಾಡುತ್ತಿದ್ದ ಕಂಪನಿಯ ಜಾಲತಾಣದಲ್ಲಿ ತಮಿಳುನಾಡಿನ ಚೆನ್ನೈ ನಗರದಲ್ಲಿರುವ ಸಂಸ್ಥೆಯ ವಿಳಾಸವನ್ನು ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಡೆ ಒಂದು ನೈಸರ್ಗಿಕ ವಸ್ತುವಾಗಿದ್ದು, ಅದರ ಒಂದು ತುಂಡಿನ ಬೆಲೆ ₹ 5175 ಎಂದು ಜಾಲತಾಣದಲ್ಲಿ ಉಲ್ಲೇಖವಾಗಿದೆ.
ಗೋವರ್ಧನ ಪರ್ವತ ಮತ್ತು ಗಿರಿರಾಜ ಎಂದು ಕರೆಯುವ ಗೋವರ್ಧನ ಬೆಟ್ಟ, ಹಿಂದೂಗಳ ಪವಿತ್ರ ತಾಣ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಗೋವರ್ಧನ್ ಮತ್ತು ರಾಧಾ ಕುಂಡ್ದಲ್ಲಿರುವ ಎಂಟು ಕಿ.ಮೀ ಸುತ್ತಳತೆಯಿರುವ ಬೆಟ್ಟವನ್ನು ಭಕ್ತರು ಏರುತ್ತಾರೆ.
'ಗಿರಿರಾಜ್' ಎಂದೂ ಕರೆಯಲ್ಪಡುವ ಗೋವರ್ಧನ ಬೆಟ್ಟವು ಮಥುರಾದ ವೃಂದಾವನದಿಂದ 20 ಕಿಲೋಮೀಟರ್ ದೂರದಲ್ಲಿದೆ. ಹಿಂದೂ ಪುರಾಣದ ಪ್ರಕಾರ, ಪವಿತ್ರ ಬೆಟ್ಟವನ್ನು ಸ್ವತಃ ಶ್ರೀಕೃಷ್ಣನೆಂದು ಭಕ್ತರು ಪರಿಗಣಿಸುತ್ತಾರೆ.