ನವದೆಹಲಿ: ಭಾರತದ ಖ್ಯಾತ ಕೃಷಿ ಮತ್ತು ಗ್ರಾಮೀಣ ಆರ್ಥಿಕ ತಜ್ಞ ಹಾಗೂ ಯೋಜನಾ ಆಯೋಗದ ಮಾಜಿ ಸದಸ್ಯ ಅಭಿಜಿತ್ ಸೇನ್ (72) ಕಳೆದ ಸೋಮವಾರ ರಾತ್ರಿ ನಿಧನರಾಗಿದ್ದಾರೆ.
‘ರಾತ್ರಿ ಸುಮಾರು11 ಗಂಟೆಗೆ ಅಭಿಜಿತ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ಹೃದಯಾಘಾತದಿಂದ ಮೃತಪಟ್ಟರು’ ಎಂದು ಅಭಿಜಿತ್ ಸಹೋದರ ಡಾ. ಪ್ರಣಬ್ ಸೇನ್ ತಿಳಿಸಿದ್ದಾರೆ.
ದೆಹಲಿಯ ಜವಾಹರಲಾಲ್ ನೆಹರೂ ವಿವಿಯಲ್ಲಿ (ಜೆಎನ್ಯು) ಪ್ರಾಧ್ಯಾಪಕರಾಗಿದ್ದ ಅಭಿಜಿತ್ ಅವರು, ಸುಮಾರು ನಾಲ್ಕು ದಶಕಗಳ ಕಾಲ ದೇಶದ ಆರ್ಥಿಕ ರಂಗದಲ್ಲಿ ಸೇವೆ ಸಲ್ಲಿಸಿದ್ದರು. ಕೇಂದ್ರ ‘ಕೃಷಿ ವೆಚ್ಚ ಹಾಗೂ ಬೆಲೆ’ ಆಯೋಗದ ಅಧ್ಯಕ್ಷ ಸೇರಿದಂತೆ ಅನೇಕ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದರು.
ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅಭಿಜಿತ್ ಸೇನ್ ಅವರು 2004 ರಿಂದ 2014 ರ ಅವಧಿಯಲ್ಲಿ ಕೇಂದ್ರ ಯೋಜನಾ ಆಯೋಗದ (ಈಗ ನೀತಿ ಆಯೋಗ) ಸದಸ್ಯರಾಗಿದ್ದರು.