ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷವು (ಬಿಜೆಪಿ) ಪಶ್ಚಿಮ ಬಂಗಾಳವನ್ನು ನಾಶಗೊಳಿಸುವ ಜಂಟಿ ಕಾರ್ಯಾಚರಣೆಯಲ್ಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜೈವೀರ್ ಶೆರ್ಗಿಲ್ ಆರೋಪಿಸಿದ್ದಾರೆ.
ಬಂಗಾಳದ ಚುನಾವಣೆಯನ್ನು ಗೆಲ್ಲಲು ಮತ್ತು ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಎರಡು ಪಕ್ಷಗಳು ಧರ್ಮವನ್ನು ಬಳಸುತ್ತಿದ್ದು, ಹಿಂಸಾಚಾರದಲ್ಲಿ ತೊಡಗಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಆಡಳಿತ ಪಕ್ಷ ಮತ್ತು ಕೇಸರಿ ಸಂಘಟನೆಯ ನಡುವಣ ರಾಜಕೀಯ ಕಾಳಗವು 'ಸೋನಾರ್ ಬಂಗಾಳ'ದ (ಸುವರ್ಣ ಬಂಗಾಳ) ಅಭಿವೃದ್ಧಿಯನ್ನು ಹಳಿ ತಪ್ಪಿಸಿದೆ ಎಂದವರು ಆರೋಪಿಸಿದ್ದಾರೆ.
ಬಿಜೆಪಿಯು ಈಸ್ಟ್ ಇಂಡಿಯಾ ಕಂಪನಿಗೆ ಸಮಾನವಾಗಿದ್ದು, ಬಂಗಾಳವನ್ನು ಲೂಟಿ ಮಾಡುವ ಗುರಿಯನ್ನು ಹೊಂದಿದೆ. ಬಿಜೆಪಿಯು '200 ಮೀರಲಿದೆ' ಅಂದರೆ ಇಂಧನ ಬೆಲೆಯು 200 ರೂ.ಗೆ ಹೆಚ್ಚಿಸಲಾಗುವುದು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರವು 200 ಪ್ರತಿಶತ ಹೆಚ್ಚಾಗಲಿಗೆ ಎಂದವರು ಲೇವಡಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ, 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದರು.
ಎರಡು ಸರ್ಕಾರಗಳು ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಚುನಾವಣೆಯನ್ನು ವಂಚನೆಯಿಂದ ಗೆಲ್ಲುವ ಪ್ರಯತ್ನದಲ್ಲಿ ನಿರತವಾಗಿದೆ. ಪೊಳ್ಳು ಭರವಸೆಗಳಿಂದ ಸತ್ಯಗಳನ್ನು ಮರೆಮಾಚಲು ಸಾಧ್ಯವಿಲ್ಲ. ಹಾಗಾಗಿ ಕಾಂಗ್ರೆಸ್-ಎಡರಂಗ-ಐಎಸ್ಎಫ್ ಮೈತ್ರಿಕೂಟ ಗೆಲ್ಲಿಸುವಂತೆ ಜನರಿಗೆ ವಿನಂತಿ ಮಾಡುತ್ತೇನೆ ಎಂದಿದ್ದಾರೆ.