ಮುಂಬೈ:ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಆಪ್ತ ಹಾಗೂ ಸಾರಿಗೆ ಸಚಿವ ಅನಿಲ್ ಪರಬ್ಅ ವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ನೋಟಿಸ್ ನೀಡಿದೆ.
ಪರಬ್ ಅವರಿಗೆ ನೀಡಿರುವ ನೋಟಿಸ್ನ ವಿವರಗಳು ತಿಳಿದಿಲ್ಲ. ಆದರೆ, ಶಿವಸೇನಾದ ಮುಖ್ಯ ವಕ್ತಾರ ಹಾಗೂ ಸಂಸದ ಸಂಜಯ್ ರಾವುತ್ ಅವರು ಪರಬ್ಗೆ ಇ.ಡಿ ನೋಟಿಸ್ ಜಾರಿಯಾಗಿರುವ ಕುರಿತು ದೃಢಪಡಿಸಿದ್ದಾರೆ.
‘ಮಂಗಳವಾರ ಇ.ಡಿ ಮುಂಬೈ ಕಚೇರಿಗೆ ಹಾಜರಾಗುವಂತೆ ಪರಬ್ಗೆ ಸೂಚಿಸಲಾಗಿದೆ. ಬಿಜೆಪಿಯ ‘ಜನ ಆಶೀರ್ವಾದ್ ಯಾತ್ರೆ’ ಮುಕ್ತಾಯಗೊಂಡಿದ್ದು, ಪರಬ್ ತಕ್ಷಣವೇ ನೋಟಿಸ್ ಸ್ವೀಕರಿಸಿದ್ದಾರೆ’ ಎಂದೂ ರಾವುತ್ ತಿಳಿಸಿದ್ದಾರೆ.
ಒಂದು ದಿನದ ಹಿಂದೆಯಷ್ಟೆ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ನಾರಾಯಣ ರಾಣೆ ಅವರು ‘ಜನ ಆಶೀರ್ವಾದ್ ಯಾತ್ರೆ’ ಸಂದರ್ಭದಲ್ಲಿ ಮರಾಠಿ ಟಿ.ವಿ ವಾಹಿನಿಯೊಂದರಲ್ಲಿ ನಡೆದ ಚರ್ಚೆಯಲ್ಲಿ, ‘ಅನೇಕ ನಾಯಕರು ಇ.ಡಿ ಮತ್ತು ಸಿಬಿಐ ನಿಗಾದಲ್ಲಿದ್ದಾರೆ’ ಎಂದು ಹೇಳಿದ್ದರು.
‘ಉದ್ಧವ್ ಠಾಕ್ರೆ ಕೆನ್ನೆಗೆ ಹೊಡೆಯುತ್ತಿದ್ದೆ’ ಎನ್ನುವ ರಾಣೆ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಪರಬ್,ರಾಣೆಯನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅನಿಲ್ ಪರಬ್ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಪೊಲೀಸ್ ಅಧಿಕಾರಿ ಸಚಿನ್ ವಾಜೆ ಪ್ರಕರಣದಲ್ಲೂ ಪರಬ್ ಅವರ ವಿರುದ್ಧ ಆರೋಪ ಕೇಳಿಬಂದಿತ್ತು.