ನವದೆಹಲಿ: ಅಫ್ಗಾನಿಸ್ತಾನದಿಂದ ಭಾರತವು ತನ್ನ 329 ಪ್ರಜೆಗಳು, ಇಬ್ಬರು ಅಫ್ಗನ್ ಸಂಸದರು ಸೇರಿದಂತೆ ಸುಮಾರು 400 ಜನರನ್ನು ಮೂರು ಪ್ರತ್ಯೇಕ ವಿಮಾನಗಳ ಮೂಲಕ ಭಾನುವಾರ ಕರೆತಂದಿದೆ.
107 ಭಾರತೀಯರು, 23 ಅಫ್ಗನ್ ಸಿಖ್ಖರು ಮತ್ತು ಹಿಂದುಗಳು ಸೇರಿದಂತೆ 168 ಜನರನ್ನು ಕಾಬೂಲ್ನಿಂದ ಭಾರತೀಯ ವಾಯುಪಡೆಯ ಸಿ–17 ವಿಮಾನದ ಮೂಲಕ ದೆಹಲಿಗೆ ಕರೆತರಲಾಯಿತು.
ಇನ್ನೊಂದು ತಂಡವನ್ನು ತಜಕಿಸ್ತಾನದ ರಾಜಧಾನಿ ದುಶಾಂಬೆಯಿಂದ ಏರ್ ಇಂಡಿಯಾ ವಿಮಾನದ ಮೂಲಕ ಕರೆತರಲಾಯಿತು. ಅದರಲ್ಲಿ 87 ಭಾರತೀಯರು ಮತ್ತು ಇಬ್ಬರು ನೇಪಾಳಿ ಪ್ರಜೆಗಳಿದ್ದರು. ಇವರನ್ನು ಐಎಎಫ್ ವಿಮಾನದ ಮೂಲಕ ಶನಿವಾರ ಅಫ್ಗಾನಿಸ್ತಾನದಿಂದ ದುಶಾಂಬೆಗೆ ಕರೆದೊಯ್ಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಬೂಲ್ನಿಂದ ಕೆಲ ದಿನಗಳಲ್ಲಿ ಅಮೆರಿಕ, ನ್ಯಾಟೊ ಕೂಟದ ದೇಶಗಳ ಮೂಲಕ ದೋಹಾಕ್ಕೆ ಸ್ಥಳಾಂತರಿಸಲಾಗಿದ್ದ 135 ಭಾರತೀಯರ ಗುಂಪನ್ನು ವಿಶೇಷ ವಿಮಾನದ ಮೂಲಕ ದೋಹಾದಿಂದ ದೆಹಲಿಗೆ ಕರೆತರಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಭಾರತವು ಅಮೆರಿಕ, ಕತಾರ್, ತಜಕಿಸ್ತಾನ ಮತ್ತು ಇತರ ಹಲವು ಮಿತ್ರ ದೇಶಗಳೊಂದಿಗೆ ಸಮನ್ವಯದಿಂದ ಈ ತೆರವು ಕಾರ್ಯಾಚರಣೆಗಳನ್ನು ನಡೆಸಿದೆ.
ಕಾಬೂಲ್ನಿಂದ ಸ್ಥಳಾಂತರಿಸಿದ 168 ಜನರ ಗುಂಪಿನಲ್ಲಿ ಅಫ್ಗಾನಿಸ್ತಾನದ ಸಂಸದರಾದ ಅನಾರ್ಕಲಿ ಹೊನ್ಯಾರ್ ಮತ್ತು ನರೇಂದರ್ ಸಿಂಗ್ ಖಾಲ್ಸಾ ಮತ್ತು ಅವರ ಕುಟುಂಬದವರು ಸೇರಿದ್ದರು ಎಂದು ಮೂಲಗಳು ತಿಳಿಸಿವೆ.